ಮನಪಾದಿಂದ ಸ್ಪಂದನೆ: ಮೇಯರ್, ಶಾಸಕರಿಂದ ಸ್ಥಳ ಪರಿಶೀಲನೆ
ಕದ್ರಿ ಶಿವಬಾಗ್ ಬಳಿ ಒಳಚರಂಡಿ ಸಮಸ್ಯೆ
ಮಂಗಳೂರು, ಜೂ. 23: ಕದ್ರಿ ಶಿವಬಾಗ್ ಬಳಿ ಒಳಚರಂಡಿ ಓವರ್ಫ್ಲೋ ಆಗಿ ಸಮಸ್ಯೆಯುಂಟಾದ ಬಗ್ಗೆ ಸ್ಥಳೀಯರ ದೂರಿಗೆ ಸ್ಪಂದಿಸಿದ ಮಂಗಳೂರು ಮಹಾನಗರ ಪಾಲಿಕೆ ತಕ್ಷಣ ಸ್ಪಂದಿಸಿ ಕಾರ್ಯಾಚರಣೆಗೆ ಮುಂದಾಗಿದೆ.
ಶಾಸಕ ಜೆ.ಆರ್. ಲೋಬೋರವರು ಮೇಯರ್ ಕವಿತಾ ಸನಿಲ್ರವರ ಜತೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭ ಅಲ್ಲಿದ್ದ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಜೆ.ಆರ್. ಲೋಬೋ, ‘‘ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಒಳಚರಂಡಿಯಲ್ಲಿ ತಡೆಯುಂಟಾಗಿ ಸಮೀಪದ ಫ್ಲಾಟ್ ಹಾಗೂ ಅಂಗಡಿಗಳಿಗೆ ಗಳಿಗೆ ಸಮಸ್ಯೆಯಾಗಿರುವ ಬಗ್ಗೆ ಇಂದು ಸ್ಥಳೀಯರು ಮೇಯರ್ಗೆ ದೂರು ನೀಡಿದ್ದರು. ತಕ್ಷಣ ಅಧಿಕಾರಿಗಳಿಗೆ ಮೇಯರ್ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿದೆ’’ ಎಂದು ಹೇಳದಿರು.
‘‘ಸಾಮಾನ್ಯವಾಗಿ ಒಳಚರಂಡಿಯ ಎರಡು ಮ್ಯಾನುವಲ್ಗಳ ನಡುವೆ 30 ಮೀಟರ್ ಅಂತರಮಿತ್ತದೆ. ಆದರೆ ಈ ಒಳಚರಂಡಿ 1960ರಲ್ಲಿ ನಿರ್ಮಾಣವಾಗಿರುವ ಕಾರಣ ಅಂತರ ಸ್ವಲ್ಪ ಹೆಚ್ಚಿದೆ ಹಾಗೂ 300 ಸೆ.ಮೀ. ವ್ಯಾಸದ ಪೈಪ್ ಇಲ್ಲಿದೆ. ಮ್ಯಾನುವೆಲ್ನಲ್ಲಿ ತ್ಯಾಜ್ಯ ತುಂಬಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಒಳಚರಂಡಿ ಪೈಪ್ನಲ್ಲಿರುವ ತಡೆಯನ್ನು ತೆರವುಗೊಳಿಸುವ ಸಲುವಾಗಿ 12 ಅಳದವರೆಗೆ ಅಗೆಯಬೇಕಾಗಿದೆ. ಪ್ರಸ್ತುತ ಇರುವ ಎರಡು ಮ್ಯಾನುವೆಲ್ಗಳ ನಡುವೆ ಮತ್ತೊಂದು ಮ್ಯಾನುವೆಲ್ ಹಾಕಿ ಸರಿಪಡಿಸಲಾಗುವುದು’’ ಎಂದು ಹೇಳಿದರು.
ಈ ಸಂದರ್ಭ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಅರುಣ್ ಕುವೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.
ಶೌಚಾಲಯಕ್ಕೆ ತ್ಯಾಜ್ಯ ಹಾಕದಿರಿ: ಕವಿತಾ ಸನಿಲ್
‘‘ಸಮಸ್ಯೆ ಬಗ್ಗೆ ಸ್ಥಳೀಯರು ಇಂದು ಮಧ್ಯಾಹ್ನದ ವೇಳೆಗೆ ನನ್ನ ಗಮನಕ್ಕೆ ತಂದಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಶೌಚಾಲಯದೊಳಕ್ಕೆ ಹಾಕುವುದರಿಂದ ಒಳಚರಂಡಿಯಲ್ಲಿ ತಡೆಯುಂಟಾಗಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕು’’ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.