ಜಿಲ್ಲಾಡಳಿತದಿಂದ ಸ್ವಚ್ಚತಾ ಅಭಿಯಾನ
ಕಾಸರಗೋಡು, ಜೂ.23: ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಸ್ವಚ್ಛತೆಗೆ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲೆಯಲ್ಲಿ ಜೂನ್ 27ರಿಂದ 29ರ ತನಕ ಸ್ವಚ್ಛತಾ ಅಭಿಯಾನ ನಡೆಸಲು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳ ಹಾಗೂ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ವ್ಯಾಪಾರ ಸಂಸ್ಥೆ, ಕೃಷಿ ಸ್ಥಳ, ಸರಕಾರೀ ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ಸ್ವಚ್ಛತೆಗೆ ನಿರ್ಧರಿಸಲಾಗಿದೆ.
ಸೊಳ್ಳೆಯ ಉತ್ಪಾದನೆ ಮೂಲ ಪತ್ತೆ ಹಚ್ಚಿ ನಾಶಗೊಳಿಸಲು , ಸಂಪೂರ್ಣ ಸ್ವಚ್ಛತೆ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಸ್ಥಳೀಯ ಸಂಸ್ಥೆ ಮೂಲಕ ಸ್ವಚ್ಛತೆಗೆ ಯೋಜನಾ ನಿಧಿಯಿಂದ ತಲಾ ೨೫ ಸಾವಿರ ರೂ . ಬಳಸಲು ಸರಕಾರ ಅನುಮತಿ ನೀಡಿದೆ. ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರು , ಸಿಬಂದಿಗಳ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಹೊರ ರಾಜ್ಯ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು. ಕ್ಲಬ್, ಸಂಘ ಸಂಸ್ಥೆ, ವಿದ್ಯಾರ್ಥಿಗಳು, ಸರಕಾರಿ ನೌಕರರು, ಉದ್ಯೋಗ ಖಾತರಿ ಮೊದಲಾದವುಗಳ ನೆರವಿನಿಂದ ಸ್ವಚ್ಛತೆ ಕೈಗೊಳ್ಳಲಾಗುವುದು.
ಜಿಲ್ಲಾಧಿಕಾರಿ ಕೆ . ಜೀವನ್ ಬಾಬು , ಶಾಸಕ ಎಂ ರಾಜ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.