ಮಂಗಳೂರು-ಮಡ್ಗಾಂವ್ ರೈಲ್ವೆ ನಿಲ್ದಾಣಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ, ಆ.6: ಉಡುಪಿ ಕೊಂಕಣ ರೈಲ್ವೆ, ಲಯನ್ಸ್ ಕ್ಲಬ್ ಉಡುಪಿ ಕರಾವಳಿ, ರೋಟರಿ ಮಣಿಪಾಲ ಹಿಲ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಮಡ್ಗಾಂವ್ ನಿಲ್ದಾಣದವರೆಗೆ ಇರುವ ಎಲ್ಲ ನಿಲ್ದಾಣಗಳಲ್ಲಿ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮಕ್ಕೆ ಗೋವಾ ಡಿಸಿಎಫ್ ಹಾಗೂ ಉದ್ಯಾನವನಗಳ ನಿರ್ದೇಶಕ ದಾಮೋದರ್ ಏ.ಟಿ. ಇಂದು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು.
ವನಮಹೋತ್ಸವವನ್ನು ದೇಶದಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬರ ಲಾಗುತ್ತಿದೆ. ರೈಲ್ವೆ ಹಳಿ ನಿರ್ಮಾಣಕ್ಕಾಗಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ದೇಶದ ಅಭಿವೃದ್ಧಿಗೆ ಇಂದು ಅನಿವಾರ್ಯ. ಅದಕ್ಕೆ ಪ್ರತಿಯಾಗಿ ನಾವು ಗಿಡ ಗಳನ್ನು ನೆಡುವ ಮೂಲಕ ಪ್ರಕೃತಿಗೆ ನಮ್ಮ ಕಾಣಿಕೆಯನ್ನು ನೀಡಬೇಕು ಎಂದು ದಾಮೋದರ್ ಏ.ಟಿ. ತಿಳಿಸಿದರು.
ದೇಶದಲ್ಲಿನ ಬಹುತೇಕ ಅರಣ್ಯಗಳು ನಾಶವಾಗಿವೆ. ಸದ್ಯಕ್ಕೆ ಉಳಿದುಕೊಂಡಿ ರುವ ಪಶ್ಚಿಮಘಟ್ಟವನ್ನು ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಮೇಲೆ ಇದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಮರ ಗಳು ಎಲ್ಲ ಜೀವ ಸಂಕುಲಗಳ ಮೂಲವಾಗಿದೆ. ಗಿಡಗಳನ್ನು ನೆಡುವುದಕ್ಕಿಂತ ಮುಖ್ಯವಾಗಿ ನೆಟ್ಟ ಗಿಡಗಳನ್ನು ಸಂರಕ್ಷಿಸುವುದು ಅತಿ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಭೋಜರಾಜ್, ಬಿ.ಎನ್.ಶಂಕರ ಪೂಜಾರಿ, ಲಯನ್ಸ್ ಅಧ್ಯಕ್ಷ ಹರೀಶ್ ಪೂಜಾರಿ, ಕಾರ್ಯದರ್ಶಿ ಸುರೇಶ್ ಬೀಡು, ರೋಟರಿ ಅಧ್ಯಕ್ಷೆ ತಾರಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.