ಮಂಗಳೂರು ಮೇಯರ್, ಆಯುಕ್ತರಿಗೆ ತಲಾ 20 ಸಾವಿರ ರೂ. ದಂಡ
ಪರವಾನಿಗೆ ಇದ್ದರೂ ಸಲೂನ್ ಜಪ್ತಿ ಪ್ರಕರಣ
ಬೆಂಗಳೂರು, ಆ.9: ಲೈಸನ್ಸ್ ಪಡೆದಿದ್ದರೂ ಸಲೂನ್ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಿರ್ದೇಶನದ ಹೊರತಾಗಿಯೂ ವಿಚಾರಣೆಗೆ ಹಾಜರಾಗದ ಮಂಗಳೂರು ನಗರ ಪಾಲಿಕೆಯ ಮೇಯರ್ ಕವಿತಾ ಹಾಗೂ ಆಯುಕ್ತ ಮುಹಮ್ಮದ್ ನಝೀರ್ ಅವರಿಗೆ ಹೈಕೋರ್ಟ್ ತಲಾ 20 ಸಾವಿರ ರೂ. ದಂಡ ವಿಧಿಸಿದೆ.
ಕಾನೂನು ಪ್ರಕ್ರಿಯೆಗಳನ್ನು ನಡೆಸದೆ ತಮ್ಮ ಸಲೂನ್ ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ ಸಲೂನ್ ಮಾಲಕ ಫ್ರಾನ್ಸೀಸ್ ಕಿರಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠ, ಮಂಗಳೂರು ನಗರ ಪಾಲಿಕೆಯ ಆಯುಕ್ತರು ಹಾಗೂ ಮೇಯರ್ ಹಾಜರಾಗಿ ಯಾವ ಆಧಾರದ ಮೇಲೆ ಸಲೂನ್ ಜಪ್ತಿ ಮಾಡಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಲು ಕಳೆದ ಆ.2 ರಂದು ನಿರ್ದೇಶಿಸಿದ್ದರು.
ಆದರೆ, ಕೋರ್ಟ್ ಆದೇಶದ ಹೊರತಾಗಿಯೂ ಮಂಗಳೂರು ಮೇಯರ್ ಹಾಗೂ ಆಯುಕ್ತರು ವಿಚಾರಣೆಗೆ ಗೈರಾದ ಹಿನ್ನಲೆಯಲ್ಲಿ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠವು ಮೇಯರ್ ಹಾಗೂ ಆಯುಕ್ತರಿಗೆ ದಂಡ ವಿಧಿಸಿ ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.