ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಮೊಬೈಲ್ ಬಾಂಬ್' ಹಿಡಿದ ಟಿವಿ ಚಾನಲ್ ಗಳು !
ಠುಸ್ಸಾದ ಸುಳ್ಳು ಸುದ್ದಿಯ ಬಾಂಬ್
ಮಂಗಳೂರು, ಸೆ. 19: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 'ಮೊಬೈಲ್ ಬಾಂಬ್' ಹೊಂದಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂಬ ಸುಳ್ಳು ವದಂತಿ ವಾಟ್ಸ್ಆ್ಯಪ್ ಹಾಗು ಕೆಲವು ಸುದ್ದಿ ವಾಹಿನಿಗಳಲ್ಲಿ ಹರಡಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯೊಬ್ಬನ ಬಳಿ ಇದ್ದ ಮೊಬೈಲ್ ಗೆ ಬಳಸುವ ಪವರ್ ಬ್ಯಾಂಕ್ ಬಗ್ಗೆ ಗೊಂದಲ ಮೂಡಿತ್ತು. ಆದರೆ ವಿಷಯ ಏನೆಂದು ಸ್ಪಷ್ಟವಾಗುವ ಮೊದಲೇ ತೀರ್ಮಾನಕ್ಕೆ ಬಂದಿದ್ದ ಕೆಲವು ಮಾಧ್ಯಮಗಳು "ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ" ಎಂದು ಸುಳ್ಳು ಸುದ್ದಿಯನ್ನು ಹರಡಿ ಬಿಟ್ಟವು.
ರಿಪಬ್ಲಿಕ್ ಟಿವಿ ನೀಡಿದ್ದ ಬ್ರೇಕಿಂಗ್ ಸುದ್ದಿ ಹೀಗಿತ್ತು.. "ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆ ಬಗ್ಗೆ ಆತಂಕ" ಎಂಬ ಶೀರ್ಷಿಕೆಯಲ್ಲಿ
"ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಲ್ ಫೋನ್ ಬಾಂಬ್ ಒಂದು ಪತ್ತೆಯಾಗಿದ್ದು ಇದು ದೊಡ್ಡ ಭದ್ರತಾ ವೈಫಲ್ಯ ಎಂದು ಹೇಳಲಾಗಿದೆ. ಇದನ್ನು ಹೊಂದಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಹೇಳಿಕೆ ನೀಡಿದ್ದು, ಮೊಬೈಲ್ ಬಾಂಬ್ ಸ್ಕ್ರೀನರ್ ಸಿಬ್ಬಂದಿಯ ಗಮನಕ್ಕೆ ಬಂದಿದೆ ಎಂದಿದೆ" .
ಟೈಮ್ಸ್ ನೌ ಕೂಡ ಈ ಸುಳ್ಳು ಸುದ್ದಿ ಸ್ಪರ್ಧೆಯಲ್ಲಿ ಹಿಂದೆ ಬೀಳದೆ 26 ವರ್ಷದ ಮಂಗಳೂರಿನ ವ್ಯಕ್ತಿಯನ್ನು ಮೊಬೈಲ್ ಬಾಂಬ್ ಹೊಂದಿದ್ದಕ್ಕೆ ಬಂಧಿಸಲಾಗಿದೆ. ಆತ ಸೇಲ್ಸ್ ಪ್ರತಿನಿಧಿ ಸೋಗಿನಲ್ಲಿದ್ದ ಭಯೋತ್ಪಾದಕನೇ ? ಇತ್ಯಾದಿ ಶೀರ್ಷಿಕೆಗಳ ಸುದ್ದಿ ಪ್ರಸಾರ ಮಾಡಿಬಿಟ್ಟಿತು. ಸಾಲದ್ದಕ್ಕೆ #terrordryrun ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಸಿತು. ಈ ಸುಳ್ಳು ಸುದ್ದಿಗಳು ಮಿಂಚಿನ ವೇಗದಲ್ಲಿ ವಾಟ್ಸ್ಆ್ಯಪ್ ನಲ್ಲಿ ಹರಡಿದವು.
ಆದರೆ ಮಂಗಳೂರು ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಅವರು " ಅದು ಸ್ವತಃ ಸಿದ್ಧಮಾಡಿಕೊಂಡ ಪವರ್ ಬ್ಯಾಂಕ್. ಸಮಗ್ರ ವಿಚಾರಣೆ ಬಳಿಕ ವಿಷಯ ಸ್ಪಷ್ಟವಾಗಿ ಪ್ರಯಾಣಿಕನನ್ನು ಪ್ರಯಾಣ ಮುಂದುವರಿಸಲು ಬಿಡಲಾಯಿತು" ಎಂದು ಹೇಳಿಕೆ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.