"1.50 ಕೋಟಿ ರೂ. ವೆಚ್ಚದಲ್ಲಿ ಮೂರು ಕೆರೆಗಳ ಅಭಿವೃದ್ಧಿ"
ಬಂಟ್ವಾಳ, ಸೆ. 21: ಬಂಟ್ವಾಳ ನಗರ ಯೋಜನೆ ಪ್ರಾಧಿಕಾರ ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಸದ್ಯ 14 ಕೆರೆಗಳಿರುವುದನ್ನು ಪ್ರಾಧಿಕಾರ ಗುರುತಿಸಿದ್ದು, ಇದರಲ್ಲಿ 3 ಕೆರೆಗಳ ಅಭಿವೃದ್ಧಿಯನ್ನು ಕೈಗೆತ್ತಿಗೊಂಡಿದೆ.
ಕಸ್ಬಾ ಗ್ರಾಮದ ಗಿರಿಗುಡ್ಡೆ, ಬರ್ದೆಲು ಹಾಗೂ ಕೌಡೇಲು ಕೆರೆಯನ್ನು ಅಭಿವೃದ್ಧಿ ಪಡಿಸಲು ನಗರ ಯೋಜನಾ ಪ್ರಾಧಿಕಾರ ಮುಂದಾಗಿದ್ದು, ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಈ ಮೂರು ಕೆರೆಗಳ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೆರೆ ಅಭಿವೃದ್ಧಿ ಶುಲ್ಕದಿಂದ ಇವುಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದ್ದು, ಉಳಿದಂತೆ ಇತರ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿ ಪುರವಾಸಿಗಳ ಸದುಪಯೋಗಕ್ಕೆ ಬರುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬುಡಾ ಅಧ್ಯಕ್ಷ ಸದಾಶಿವ ಬಂಗೇರಾ ನೇತೃತ್ವದ ತಂಡ ಗಿರಿಗುಡ್ಡೆ, ಬರ್ದೇಲು ಹಾಗೂ ಕೌಡೇಲು ಕೆರೆಗಳನ್ನು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಇವುಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬುಡಾ ಕಾರ್ಯದರ್ಶಿ ಅಭಿಲಾಷ್ ಎಂ.ಪಿ, ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಬುಡಾ ಸದಸ್ಯರಾದ ಎಂ.ವೈ.ಲತೀಫ್ ಖಾನ್, ಗೋಪಾಲ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.