ತೊಕ್ಕೊಟ್ಟು: ಗುರು ವಂದನೆ, ಶೈಕ್ಷಣಿಕ ಕಾರ್ಯಗಾರ
ಉಳ್ಳಾಲ, ಸೆ. 22: ಕೆಲವು ಶಿಕ್ಷಣ ಸಂಸ್ಥೆಗಳ ಯೋಚನೆ ಭಿನ್ನವಾಗಿದೆ. ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶ ಕೊಡುವಂತೆ ಎಲ್ಲ ಸಂಸ್ಥೆಗಳು ಹಾಗೆಯೇ ಮುಂದುವರಿದರೆ ಸಾಧಾರಣ ಅಂಕ ಗಳಿಸಿರುವ ಶೈಕ್ಷಣಿಕವಾಗಿ ಕಡಿಮೆ ಸಾಮರ್ಥ್ಯ ಇರುವ ಮಕ್ಕಳ ಭವಿಷ್ಯ ಏನಾಗಬೇಕು. ಅದಕ್ಕಾಗಿ ಶಿಕ್ಷಕರು ಮಕ್ಕಳಲ್ಲಿ ಮೊದಲಾಗಿ ಆತ್ಮಸ್ಥೈರ್ಯ ತುಂಬುವ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಎಂ. ಆರ್. ರವಿ ಅಭಿಪ್ರಾಯಪಟ್ಟರು.
ಮಂಗಳೂರು ವಿಧಾನ ಸಭಾ ಕ್ಷೇತ್ರ ಮಟ್ಟದ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗಾಗಿ ಯು.ಟಿ. ಫರೀದ್ ಫೌಂಡೇಶನ್ ಸಹಯೋಗದಲ್ಲಿ ಕಲ್ಲಾಪಿನಲ್ಲಿ ಜರುಗಿದ ಗುರವಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಮತ್ತು ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಿದರೆ ಅವರಿಂದ ಉತ್ತಮ ಫಲಿತಾಂಶ ಪಡೆಯುವುದು ಮಹತ್ಸಾಧನೆ ಅಲ್ಲ. ಸಾಧಾರಣ ಅಂಕ ಪಡೆದ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ದಾಖಲಿಸುವುದು ಶಿಕ್ಷಕರಿಗೆ ಸವಾಲಾದಾರೂ ಅದರಿಂದ ಧನ್ಯತಾ ಭಾವ ಸಿಗುತ್ತದೆ ಎಂದು ಹೇಳಿದರು.
ಇತ್ತ್ತೀಚೆಗೆ ಕೆಲವು ಪೋಷಕರು ತಮ್ಮ ಮಕ್ಕಳು ಮಾತು ಕೇಳೋದಿಲ್ಲ, ಕಷ್ಟ ಪಟ್ಟು ಸಾಕಿದ್ದೇವೆ, ಮಕ್ಕಳು ವೃತ್ತಿಗೆ ಸೇರಿಕೊಂಡ ಬಳಿಕ ಪೋಷಕರನ್ನು ನೋಡಲು ಹಿಂಜರಿಯುತ್ತಾರೆ. ದೊಡ್ಡ ಸಂಬಳ ಪಡೆದರೂ ಪೋಷಕರ ಜೊತೆಗೆ ದಿನಕ್ಕೆ ಕನಿಷ್ಠ ಒಂದು ಗಂಟೆ ಮಾತನಾಡಲು ಹಿಂಜರಿಯುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಅಷ್ಟೆಲ್ಲ ಕಷ್ಟಪಟ್ಟು ಸಾಕಿ ಸಲಹಿ ವಿದ್ಯೆ ಬುದ್ಧಿ ಕೊಟ್ಟು ಜತನದಿಂದ ಕಾಕಾಡಿದ ಮಕ್ಕಳು ಪೋಷಕರನ್ನು ನಿರ್ಲಕ್ಷಿಸುವುದಾದರೆ ಕಲಿತಿರುವ ವಿದ್ಯೆ ಯಾವ ುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಸಮಾಜದಲ್ಲಿ ವೈದ್ಯರು, ಎಂಜಿನಿಯರ್ಗಿಂತಲೂ ಶಿಕ್ಷಕರ ಸ್ಥಾನ ದೊಡ್ಡದು. ಡಾಕ್ಟರ್ ಎಂಜಿನಿಯರ್ ರೂಪಿಸಿವುದೆಲ್ಲವೂ ಶಿಕ್ಷಕರೇ ಆಗಿದ್ದು ಒಬ್ಬ ವೈದ್ಯ ತನ್ನ ವೃತ್ತಿಯಲ್ಲಿ ಕೆಟ್ಟವನಾದರೆ ಆತನಿಂದ ಒಬ್ಬ ರೋಗಿ ಸಾಯಬಹುದು. ಒಬ್ಬ ಎಂಜಿನಿಯರ್ ತನ್ನ ವೃತ್ತಿಯಲ್ಲಿ ಕೆಟ್ಟವನಾದರೆ ಒಂದು ಕಟ್ಟಡ ಉರುಳಿ ಬೀಳಲು ಕಾರಣವಾಗಬಹುದು. ಆದರೆ ಒಬ್ಬ ಶಿಕ್ಷಕ ಕೆಟ್ಟವನಾಗಿದ್ದರೆ ಆತ ಹೇಳಿಕೊಡುವ ಪಾಠದಿಂದ ಇಡೀ ಸಮಾಜ, ಇಡೀ ಪರಂಪರೆ, ಒಂದು ಪೀಳಿಗೆಯೇ ಹಾಳಾಗುವ ಅಪಾಯವಿದೆ. ಅಲೆಕ್ಸಾಂಡರ್ ಕೂಡಾ ಗುರುವನ್ನು ಬಹಳವಾಗಿ ಗೌರವಿಸುತ್ತಿದ್ದ. ಆ ಕಾರಣದಿಂದ ಸಮಾಜದಲ್ಲಿ ಕೆಟ್ಟ ಶಿಕ್ಷಕರಿರಲು ಎಂಬ ಮಾತು ಇದುವರೆಗೆ ಸತ್ಯವೇ ಆಗಿ ಉಳಿದಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್ ನಿವೃತ್ತ 29ಶಿಕ್ಷಕರನ್ನು ಸನ್ಮಾನಿಸಿ, ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರು ಕೊಟ್ಟ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಹಾಗೂ ಶಾಲಾ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಎಲ್ಲರ ಸಹಕಾರದಿಂದ ಗುರುವಂದನೆ ಶೈಕ್ಷಣಿಕ ಕಾರ್ಯಗಾರ ಆಯೋಜಿಸಲಾಗಿದೆ ಎಂದು ನುಡಿದರು.
ದೇರಳಕಟ್ಟೆಯ ಕಣಚೂರು ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಯು.ಕೆ. ಮೋನು, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂ ಮೋನು, ತಾಲೂಕು ಪಂಚಾಯಿಉತಿ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕ ವೈ. ಶಿವರಾಮಯ್ಯ, ಬಂಟ್ವಾಳ ಕ್ಷೇತ್ರ ಶಿಕ್ಷಣಾಕಾರಿ ಶಿವಪ್ರಕಾಶ್, ಪ್ರಭಾರ ಉಪಯೋಜನಾ ಸಮನ್ವಯ ಅಕಾರಿ ಎಸ್ ಎಸ್ ಒ ಗೀತಾ ದೇವದಾಸ್, ಕ್ಷೇತ್ರ ಸಮನ್ವಯ ಅಕಾರಿ ಗೀತಾ ಶಾನುಭೋಗ್, ಬಂಟ್ವಾಳ ಕ್ಷೇತ್ರ ಸಮನ್ವಯ ಅಕಾರಿ ರಾಜೇಶ್, ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ. ವಿ. ಆಳ್ವ, ಶಿವಶಂಕರ ಭಟ್, ಜಗದೀಶ್ ಶೆಟ್ಟಿ , ಡಾ. ಎನ್. ಇಸ್ಮಾಯಿಲ್, ಸ್ಟ್ಯಾನಿ ತಾವ್ರೊ, ಎಂ.ಎಚ್. ಮಲಾರ್, ಅಲೋಶಿಯಸ್ ಡಿಸೋಜ, ಅಶೋಕ್ ಕುಮಾರ್, ತ್ಯಾಗಂ ಹರೇಕಳ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ. ಎಸ್. ಗಟ್ಟಿ ಸ್ವಾಗತಿಸಿದರು. ಬಿ.ಎಂ. ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ.ಕೆ. ಮಂಜನಾಡಿ ವಂದಿಸಿದರು.