ಭಾಷಣ ಮಾಡುತ್ತಿದ್ದ ಯಡಿಯೂರಪ್ಪರ ಮೈಕ್ ಕಿತ್ತು ಹಲ್ಲೆಗೆ ಮುಂದಾದ ಬಿಜೆಪಿ ಕಾರ್ಯಕರ್ತರು
ಬಿಜೆಪಿಯ ಪರಿವರ್ತನಾ ರ್ಯಾಲಿ
ಇಂಡಿ, ಡಿ. 3: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಭಾಷಣ ಮಾಡುತ್ತಿದ್ದ ವೇಳೆ ಬಿಜೆಪಿಯ ಕಾರ್ಯಕರ್ತರು ಅವರ ಕೈಯಿಂದ ಮೈಕ್ ಎಳೆದು ಹಾಕಿ, ಹಲ್ಲೆಗೆ ಮುಂದಾದ ಘಟನೆ ವಿಜಯಪುರದ ಇಂಡಿ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶನಿವಾರ ರಾತ್ರಿ ಬಿಜೆಪಿಯ ಪರಿವರ್ತನಾ ರ್ಯಾಲಿ ಸಮಾವೇಶ ನಡೆಯುತ್ತಿತ್ತು. ಈ ಸಂದರ್ಭ ಭಾಷಣ ಆರಂಭಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಮಾಜಿ ಶಾಸಕ ರವಿಕಾಂತ ಪಾಟೀಲ್ ಕಾರಣ ಎಂದು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ಬಿಜೆಪಿ ಬೆಂಬಲಿಗರು ಆಕ್ರೋಶಗೊಂಡು ವೇದಿಕೆ ಮೇಲೆ ಏರಿ ಯಡಿಯೂರಪ್ಪ ಅವರ ಮೈಕ್ ಕಿತ್ತು ಹಾಕಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರೊಂದಿಗೆ ಆಕ್ರೋಶಗೊಂಡ ಗುಂಪು ಮಾತಿನ ಚಕಮಕಿ, ತಳ್ಳಾಟ ನಡೆಸಿತು.
ನಂತರ ಮಾತನಾಡಿದ ಯಡಿಯೂರಪ್ಪ ನಾನು ಯಾರನ್ನು ಹೊಗಳಲಿಲ್ಲ, ತೆಗಳಲಿಲ್ಲ. ಎಲ್ಲರ ಶ್ರಮ ಇದೆ ಎಂದು ಹೇಳುತ್ತಿದ್ದೆ, ಅಷ್ಟರಲ್ಲಿ ಕಾರ್ಯಕರ್ತರು ಉದ್ರೀಕ್ತರಾದರು. ಟಿಕೆಟ್ ನೀಡುವ ವಿಚಾರ ಹೈಕಮಾಂಡಗೆ ಬಿಟ್ಟಿದ್ದು, ಅದಕ್ಕಾಗಿಯೇ ಸರ್ವೆ ಕಮಿಟಿ ಸೂಕ್ತ ಹಾಗೂ ಪ್ರಬಲ ಅಭ್ಯರ್ಥಿ ಯನ್ನು ಸೂಚಸಲಿದೆ ಎಂದು ಹೇಳಿದರು.