ಸಾಗರ: ಹಾಲಪ್ಪ, ಬೇಳೂರು ಬೆಂಬಲಿಗರ ನಡುವೆ ಹೊಯ್ಕೈ
ಸಾಗರ, ಡಿ.25: ಸಾಗರ ಬಿಜೆಪಿಯಲ್ಲಿ ಬಿಜೆಯೊಳಗೆ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬೆಂಬಲಿಗರ ನಡುವೆ ನಿನ್ನೆ ರಾತ್ರಿ ಹೊಯ್ಕೈ ನಡೆದಿದೆ. ಈ ಬಗ್ಗೆ ಸಾಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರ್ಯಾಲಿ ಡಿ.26ರಂದು ಸಾಗರಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟುವ ವಿಚಾರದಲ್ಲಿ ಬೇಳೂರು ಬೆಂಬಲಿಗರಾದ ವಿನಯ್ ಹಾಗೂ ಹಾಲಪ್ಪ ಅವರ ಬೆಂಬಲಿಗರಾದ ಗಣೇಶ್ ಗಟ್ಟಿ ತಂಡಗಳು ಪರಸ್ಪರ ಕೈಕೈ ಮಿಲಾಯಿಸಿವೆ.
ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಾನು ಸ್ಪರ್ಧಿಸುವ ಸೊರಬ ಕ್ಷೇತ್ರಕ್ಕಿಂತಲೂ ಹೆಚ್ಚು ಸಾಗರ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಬೇಳೂರು ಗೋಪಾಲಕೃಷ್ಣ ಮತ್ತು ಅವರ ಬೆಂಬಲಿಗರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ಇವರೊಳಗಿನ ಈ ಮುಸುಕಿನ ಗುದ್ದಾಟ ನಿನ್ನೆ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಸ್ಫೋಟಗೊಂಡಿದೆ.
ಇದೀಗ ಗಣೇಶ್ ಗಟ್ಟಿ ಹಾಗೂ ವಿನಯ್ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.