ವಿಚಾರವಾದಿಗಳ ಹತ್ಯೆಗೆ ಖಂಡನೆ: ಸಹಿ ಸಂಗ್ರಹ
ಗದಗ, ಫೆ.15: ಗೌರಿಲಂಕೇಶ್, ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್ ಹತ್ಯಾ ವಿರೋಧಿ ಸಮಿತಿ ಗದಗ ಇದರ ವತಿಯಿಂದ ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ, ಡಾ.ಎಂ.ಎಂ ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯ ಹಂತಕರನ್ನು ಇನ್ನೂ ಬಂಧಿಸಲು ಸಾಧ್ಯವಾಗದ ಸರಕಾರದ ವೈಫಲ್ಯವನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಯ ಕಾರ್ಯಕರ್ತರಿಂದ ಸಹಿ ಸಂಗ್ರಹ ಚಳುವಳಿ ನಡೆಸಲಾಯಿತು.
ಈ ವೇಳೆ ನೂರಾರು ಸಾರ್ವಜನಿಕರು ಪಾಲ್ಗೊಂಡು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿಫಲತೆಯನ್ನು ಖಂಡಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಹಿ ಚಳುವಳಿಗೆ ಚಾಲನೆ ನೀಡಿ ಮಾತನಾಡಿದ ಪ್ರೊ. ವಿ.ಕೆ ಪಾಟೀಲ್, ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕಲು ನಡೆದಿರುವ ಈ ಕಗ್ಗೊಲೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಹಂತಕರನ್ನು ಬಂಧಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಐಟಿಯುನ ಮಹೇಶ ಹಿರೇಮಠ, ಡಾ.ಡಿ.ಬಿ.ಗವಾನಿ, ಡಾ.ರಾಮಚಂದ್ರ ಹಂಸನೂರ, ಶೇಕಣ್ಣ ಕವಳಿಕಾಯಿ ಬಸವರಾಜ ಸೂಳಿಭಾವಿ, ಬಿ.ಕೆ.ಪೂಜಾರ ಪ್ರೊ.ರಾಜಶೇಖರ, ದಾನರೆಡ್ಡಿ, ಎಚ್.ಬಿ.ಪೂಜಾರ, ನ್ಯಾಯವಾದಿ ಅನಂತ ಕಟ್ಟೀಮನಿ ಮಾತನಾಡಿದರು.
ಗದಗ ದಲಿತ ಕಲಾ ಮಂಡಳಿ ಕಲಾವಿದರು ಕ್ರಾಂತಿಗೀತೆ ಹಾಡಿ ಸಾರ್ವಜನಿಕರ ಗಮನ ಸೆಳೆದರು. ವಿದ್ಯಾರ್ಥಿಗಳು, ಶಿಕ್ಷಕರು, ವ್ಯಾಪಾರಸ್ಥರು, ಅಟೋಚಾಲಕರು ಸೇರಿದಂತೆ ಹಲವಾರು ಸಾರ್ವಜನಿಕರಿಂದ ಹಂತಕರ ಬಂಧನವಾಗಬೇಕೆಂದು ಆಗ್ರಹಿಸಲಾಯಿತು.
ಶರೀಫ್ ಬಿಳಿಯಲಿ, ರಾಮಕೃಷ್ಣ ಕೊರವರ, ರಮೇಶ ಕೊಳೂರು, ಯಲ್ಲಪ್ಪರಾಮಗಿರಿ, ಮುತ್ತು ಬಿಳಿಯಲಿ, ಬಸು ಬೇವಿನಮರ, ಹುಚ್ಚಪ್ಪ ಚಲುವಾದಿ, ಪರಶು, ಅನಿಲ ಕಾಳೆ, ಮುರುಗೇಶ ಚಳುವಳಿಯ ನೇತೃತ್ವ ವಹಿಸಿದ್ದರು.