ಕೊಪ್ಪ: ಬಾಲಕಿಯ ಅತ್ಯಾಚಾರಗೈದು, ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ; ಆರೋಪಿ ಬಂಧನ
ಚಿಕ್ಕಮಗಳೂರು, ಎ.7: ಯುವಕನೊಬ್ಬ ಹಾಡುಹಗಲೇ ಶಾಲಾ ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿರುವ ಅಮಾನವೀಯ ಘಟನೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಪಂ ವ್ಯಾಪ್ತಿಯ ಬಿಲ್ಲಗದ್ದೆ ಸಮೀಪದ ಕೆಸಗೋಡು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ 12 ವರ್ಷದ ಶ್ರೀರಕ್ಷಾ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯಾಗಿದ್ದು, ಅದೇ ಗ್ರಾಮದ ಸುಮುಖ(18) ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆಂದು ತಿಳಿದು ಬಂದಿದೆ.
ಘಟನೆಯ ವಿವರ: ಶನಿವಾರ ಮಧ್ಯಾಹ್ನ ಕೆಳಕೊಪ್ಪದಲ್ಲಿರುವ ಶಾಲೆ ಮುಗಿಸಿ ಆಟೊದಲ್ಲಿ ಕೆಸಗೋಡಿಗೆ ಬಂದಿಳಿದಿದ್ದಾಳೆ. ಅಲ್ಲಿಂದ ಕಾಡು ರಸ್ತೆಯಲ್ಲಿ ಅರ್ಧ ಕಿ.ಮೀ.ದೂರದಲ್ಲಿರುವ ಮನೆಗೆ ನಡೆದುಕೊಂಡು ಒಬ್ಬಳೇ ಹೋಗುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಶ್ರೀರಕ್ಷಾಳ ಮೇಲೆರೆಗಿದ ಸುಮುಖ ಆಕೆಯ ಅತ್ಯಾಚಾರ ಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯಿಂದ ಬೆಚ್ಚಿಬಿದ್ದ ಬಾಲಕಿ ಕಿರುಚಿಕೊಳ್ಳಲು ಪ್ರಾರಂಭಿಸಿದಾಗ ಹೆದರಿದ ಯುವಕ ಆಕೆಯ ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆಂಬ ಆರೋಪಿಸಲಾಗಿದೆ. ದಾರಿಹೋಕರು ಬಾಲಕಿಯ ಶವ ಕಂಡು ಕೂಡಲೇ ಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿರುವುದನ್ನು ವೈದ್ಯರು ದೃಢ ಪಡಿಸಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಆರೋಪಿ ಸುಮುಖನನ್ನು ಹರಿಹರ ಪೊಲೀಸರು ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಆತನನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಾಲಕಿಯ ಮೃತದೇಹ ಕೊಪ್ಪ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗಾಗಿ ಇರಿಸಲಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕೆಸಗೋಡು ಗ್ರಾಮಕ್ಕೂ ಭೇಟಿ ನೀಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
ಗ್ರಾಮದಲ್ಲಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ: ಎಸ್ಪಿಯಿಂದ ತನಿಖೆಯ ಭರವಸೆ
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಾಗೂ ಹರಿಹರಪುರ ಪೊಲೀಸ್ ಠಾಣೆಗೆ ಜಿಲ್ಲಾ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಭೇಟಿ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಅವರು, ಈ ವೇಳೆ ಠಾಣೆಯ ಮುಂದೆ ಜಾಮಾಯಿಸಿದ್ದ ನೂರಾರು ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. 'ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆತನ ಡಿಎನ್ಎ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ತನಿಖೆಯನ್ನು ಪಾರದರ್ಶಕವಾಗಿ ಮಾಡಲಾಗುತ್ತದೆ. ನಿಜವಾದ ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು' ಎಂದು ಭರವಸೆ ನೀಡಿದ್ದರಿಂದ ಸ್ಥಳದಲ್ಲಿ ಪರಿಸ್ಥಿತಿ ತಿಳಿಯಾಗಿದೆ ಎಂದು ತಿಳಿದು ಬಂದಿದೆ.