ರಾಜ್ಯ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ: ಮೀನಾಕ್ಷಿ ಲೇಖಿ
ಚಿಕ್ಕಮಗಳೂರು, ಎ.26: ಕರ್ನಾಟಕದಲ್ಲಿ ಪ್ರಸಕ್ತ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಫಲಿತಾಂಶವು ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ನರೇಂದ್ರ ಮೋದಿ ಆಡಳಿತದಿಂದಾಗಿ ದೇಶಾದ್ಯಂತ ಜನತೆ ಸಂತುಷ್ಟರಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತಾರೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಚುನಾವಣೆ ಮುಂದಿನ ಸಂಸದೀಯ ಚುನಾವಣೆಗೆ ದಿಕ್ಸೂಚಿ ಅಲ್ಲವೇ ಅಲ್ಲ. ಪ್ರಧಾನಿ, ಅಮಿತ್ ಶಾ ಸೇರಿದಂತೆ ಪಕ್ಷದ ಎಲ್ಲ ರಾಷ್ಟ್ರೀಯ ನಾಯಕರೂ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರೇ ಆಗಿದ್ದಾರೆ. ಪಕ್ಷದ ಸೂಚನೆ ಮೇರೆಗೆ ಹಾಗೂ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ರಾಜ್ಯದ ಚುನಾವಣಾ ಪ್ರಚಾರದಲ್ಲಿ ಅವರು ಬಾಗಿಯಾಗುತ್ತಿದ್ದಾರಷ್ಟೇ. ಈ ಚುನಾವಣೆಯ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.
ಕಳೆದ 5 ವರ್ಷಗಳ ಕಾಲ ರಾಜ್ಯಾಧಿಕಾರದ ಗದ್ದುಗೆ ಏರಿ ಆಡಳಿತ ನಡೆಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದ ಎಲ್ಲ ಕ್ಷೇತ್ರಗಳಲ್ಲೂ ವೈಫಲ್ಯ ಕಂಡಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಸಮಾಜವನ್ನು ಒಡೆದು ಆಡಳಿತ ನಡೆಸುವ ಸಂಚಿನೊಂದಿಗೆ ಮತಗಳ ಧ್ರುವೀಕರಣದ ರಾಜಕೀಯವನ್ನೇ ಕಳೆದ 5 ವರ್ಷಗಳಿಂದ ಮಾಡಿದ ಕೀರ್ತಿ ಸಿದ್ದರಾಮಯ್ಯ ಸರಕಾರಕ್ಕೆ ಸಲ್ಲಬೇಕು. ಹಿಂದೂ ವಿರೋಧಿ ನೀತಿಯಿಂದ ಕೂಡಿದ ಕಾಂಗ್ರೆಸ್ನ ಆಡಳಿತದಿಂದಾಗಿ ರಾಜ್ಯದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರ ಮಕಾಡೆ ಮಲಗಲಿದ್ದು, ಬಿಜೆಪಿ ಸರಕಾರ ರಾಜ್ಯದಲ್ಲಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಮಾಜಿ ಸಿಎಂ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಧಿಕಾರಲ್ಲಿದ್ದ ಸಿಎಂ ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರಕಾರ ಜನಪರ ಯೋಜನೆಗಳನ್ನು ಜನರಿಗೆ ನೀಡಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸರಕಾರ ವಿಶೇಷ ಆದ್ಯತೆ ನೀಡಿ, ಪ್ರತ್ಯೇಕ ಕೃಷಿ ಬಜೆಟ್ ಅನ್ನು ನೀಡಿದೆ. ಆದರೆ ಕಾಂಗ್ರೆಸ್ ಸರಕಾರ ರೈತರ ಹಾಗೂ ಜನಸಾಮನ್ಯ ಕಲ್ಯಾಣ ಹಾಗೂ ಜನಹಿತವನ್ನು ಮರೆತು ಆಡಳಿತ ಯಂತ್ರಾಂಗವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದ ಮೀನಾಕ್ಷಿ ಲೇಖಿ, ಸಿಎಂ ಸಿದ್ದರಾಮಯ್ಯ ಸರಕಾರ ರಾಜ್ಯದಲ್ಲಿ 160 ತಾಲೂಕುಗಳು ಬರ ಪೀಡಿತವೆಂದು ಘೋಷಿಸಿದ್ದಾರೆ. ಈ ಬರಪೀಡಿತ ತಾಲೂಕುಗಳ ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರಕಾರ ಬರ ಪೀಡಿತ ತಾಲೂಕುಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುದಾನ ನೀಡಲು ಮುಂದಾದಾಗ ಸಿಎಂ ಸಿದ್ದರಾಮಯ್ಯ ಅದನ್ನು ನಿರಾಕರಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದರು. ಅಲ್ಲದೇ ಕೇಂದ್ರ ಸರಕಾರ ಇದಕ್ಕಾಗಿ ಬಿಡುಗಡೆ ಮಾಡಿದ 5,600 ಕೋ.ರೂ. ಅನುದಾನವನ್ನು ಸಮರ್ಪಕವಾಗಿ ಬಳಸದೇ ದುರುಪಯೋಗಪಡಿಸಿಕೊಂಡಿದೆ. ಈ ಪೈಕಿ ಕೇವಲ 600 ಕೋ.ರೂ. ಮಾತ್ರ ಬಳಸಿಕೊಂಡಿರುವ ಬಗ್ಗೆ ರಾಜ್ಯ ಸರಕಾರದ ದಾಖಲೆ ನೀಡಿದೆ ಎಂದವರು ದೂರಿದರು.
ರಾಜ್ಯ ಸರಕಾರ ಕೇಂದ್ರದ ಜನಪರ ಯೋಜನೆಗಳನ್ನು ರಾಜ್ಯದ ಜನರಿಗೆ ಮುಟ್ಟಿಸುವಲ್ಲಿ ವಿಫಲವಾಗಿದೆ. ಸಕಾಲದಂತಹ ಪ್ರಶಸ್ತಿ ವಿಜೇತ ಯೋಜನೆಯನ್ನೇ ಕಾಂಗ್ರೆಸ್ ಸರಕಾರ ರದ್ದುಗೊಳಿಸಿದೆ. ರಾಜ್ಯದಾದ್ಯಂತ ಉತ್ತಮವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಮಂತ್ರಿಗಳು ಕಿರುಕುಳ ನೀಡುತ್ತ ವರ್ಗಾವಣೆ ಮಾಡಿದ್ದಾರೆ. ಹಾಸನ ಜಿಲ್ಲಾಧಿಕಾರಿ ಅವರನ್ನು ಸಚಿವ ಎ.ಮಂಜು ಅವರು ತಮ್ಮ ಹಿತಾಸಕ್ತಿಗಾಗಿ 4 ಬಾರಿ ವರ್ಗಾವಣೆ ಮಾಡಲು ಪ್ರಯತ್ನಿಸಿ ದಕ್ಷ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ರಾಜ್ಯ ಸರಕಾರ ವಿಫಲ ಆಡಳಿತ ನೀಡಿದ್ದು, ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸದೇ ಶಾಲೆಗಳು ಬಾಗಿಲು ಮುಚ್ಚುವಂತೆ ಮಾಡಿದೆ. ಜನಪರವಾಗಿ ಆಡಳಿತ ನಡೆಸಬೇಕಾದ ರಾಜ್ಯ ಸರಕಾರ ರಾಜ್ಯದಾದ್ಯಂತ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡಿ ಅಮಾಯಕ ಹಿಂದುಗಳನ್ನು ಬಲಿಪಶು ಮಾಡಿದೆ. ಹಿಂದೂ ಯುವಕರ ಮೇಲೆ ವಿನಾಕರಣ ಪ್ರಕರಣ ದಾಖಲಾಗುವುಂತೆ ನೋಡಿಕೊಂಡ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಜಾ ಮಾಡುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸಿದೆ ಎಂದು ಲೇಖಿ ಇದೇ ವೇಳೆ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಸಿ.ಎಚ್.ಲೋಕೇಶ್, ವರಸಿದ್ದಿ ವೇಣುಗೋಪಾಲ್, ಸರೋಜಾ ಸುರೇಂದ್ರ, ತಮ್ಮಯ್ಯ, ರಾಜಪ್ಪ, ಪುಷ್ಪರಾಜ್ ಮತ್ತಿತರರು ಉಪಸ್ಥಿತರಿದ್ದರು.
ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸದಿರುವುದರ ಹಿಂದೆ ಸೋಲಿನ ಭೀತಿ ಇದೆ ಎಂಬುದು ಸುಳ್ಳು. ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಯುವಮೋರ್ಚಾದ ನೇತೃತ್ವ ನೀಡಿ ರಾಜ್ಯದಾದ್ಯಂತ ಅವರ ಸೇವೆಯನ್ನು ಪಕ್ಷ ಬಳಸಿಕೊಳ್ಳವ ಇರಾದೆ ಹೊಂದಿದೆ. ವರುಣಾದಲ್ಲಿ ಅವರನ್ನು ಕಣಕ್ಕಿಳಿಸಿದಲ್ಲಿ ಗೆದ್ದೇ ಗೆಲ್ಲುತ್ತಾರೆ. ಆದರೆ ಅವರ ಸೇವೆ ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುತ್ತದೆ. ಈ ಕಾರಣಕ್ಕೆ ಅಲ್ಲಿ ಅವರನ್ನು ಕಣಕ್ಕಿಳಿಸಿಲ್ಲ
- ಮೀನಾಕ್ಷಿ ಲೇಖಿ