ಸಿದ್ದರಾಮಯ್ಯರಂತಹ ಜಾತಿ ಬೀಜ ಬಿತ್ತುವ ಭ್ರಷ್ಟನನ್ನು ಕಂಡಿಲ್ಲ: ಬಿ.ಎಸ್ ಯಡಿಯೂರಪ್ಪ
ಹಾಸನ,ಎ.27: ಮುಖ್ಯಮಂತ್ರಿ ಸಿದ್ದರಾಮಯ್ಯನಂತಹ ಜಾತಿ ಬೀಜ ಬಿತ್ತುವ ಭ್ರಷ್ಟನನ್ನು ನಾನು ಕಂಡಿಲ್ಲ. ರಾಜ್ಯದೆಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸೀಟು ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸಾಲಗಾಮೆಯಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾರ್ಥದಿಂದ ಹಗಲು ಲೂಟಿ ಮಾಡಿ ವೀರಶೈವ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ಈ ರಾಜ್ಯದಲ್ಲಿ ಸಿದ್ದರಾಮಯ್ಯನಂತಹ ಜಾತಿ ಬೀಜ ಬಿತ್ತುವ ಭ್ರಷ್ಟನನ್ನು ನಾನು ಎಲ್ಲೂ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ನಾಗೇಗೌಡ ಅವರು 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆಂದು. ಪ್ರೀತಂ ನಾಮಪತ್ರ ಸಲ್ಲಿಸಲು ಸೇರಿದ್ದ ಬೃಹತ್ ಜನಸ್ತೋಮ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಅವರು, ಮೇ.18 ರಂದು ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ. ಮತ್ತೆ ಇದೆ ಸ್ಥಳಕ್ಕೆ ಬಂದು ಆಗ 1 ಲಕ್ಷ ಜನ ಸೇರಿಸಿ ಈ ಭಾಗದಲ್ಲಿ ಸಂಭ್ರಮಾಚರಣೆ ಮಾಡೋಣವೆಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ತಾವು ಅಧಿಕಾರಕ್ಕೆ ಬಂದರೆ ಹಾಸನ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ವಿಶೇಷ ಯೋಜನೆ ಕೈಗೊಳ್ಳುವುದಾಗಿ ಹೇಳಿದ ಅವರು ಸಾಲಗಾಮೆ ಹೋಬಳಿಯನ್ನು ಮಾದರಿ ಹೋಬಳಿಯನ್ನಾಗಿ ಮಾಡುವ ಭರವಸೆ ನೀಡಿದರು. ಹಾಗೆಯೇ ಈ ಭಾಗದ ಸೀಗೆ ಗುಡ್ಡದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಅವರು ಆಶ್ವಾಸನೆ ನೀಡಿದರು.
ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರೀತಂ ಜೆ. ಗೌಡ ಮಾತನಾಡಿ, ರೈತರು ಸ್ವಾವಲಂಬಿಗಳು. ಜೀವನ ಮಾಡಲು ಭೂಮಿ ಬೇಕು. ಬೆಳೆ ಬೆಳೆಯಲು ನೀರು ಅವಶ್ಯಕವಾಗಿದೆ. ಸಾಲಗಾಮೆ ಹೋಬಳಿ ಸುತ್ತ ಒಟ್ಟು 46 ಕೆರೆಗಳಿದ್ದು, ಈ ಭಾಗದಲ್ಲಿ ನೀರು ತುಂಬಿಸಬೇಕೆಂಬುದು ದೊಡ್ಡ ನಾಯಕರಿಗೆ ಇದು ಕೇಳಿಸುತ್ತಿಲ್ಲ ಎಂದು ದೂರಿದರು. ಇನ್ನು 15 ದಿನಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಮತ್ತೆ ಇದೆ ಜಾಗಕ್ಕೆ ಬಂದು ಎಲ್ಲಾ ಕೆರೆಗೆ ನೀರು ತುಂಬಿಸುವ ವಿಶೇಷ ಯೋಜನೆಯನು ಜಾರಿಗೆ ತರುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಸಾಲಗಾಮೆಗೆ ಆಗಮಿಸುವ ಮೊದಲು ಬೂವನಹಳ್ಳಿ ಮತ್ತು ದಾಸರಕೊಪ್ಪಲು ಭಾಗದ ರಸ್ತೆಯಲ್ಲಿ ಕಾದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಜೈಕಾರ ಹಾಕಿದರು. ಇದೆ ವೇಳೆ ಶಾಲು ಹೊದಿಸಿ, ಹಾರ ಹಾಕಿ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಹಾಸನ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಅಗಿಲೆ ಯೋಗಿಶ್, ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರೀತಮ್ ಜೆ. ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮಾಜಿ ಶಾಸಕ ಬಿ.ವಿ. ಕರೀಗೌಡ, ಹಿರಿಯ ಮುಖಂಡರು ಭುವನಾಕ್ಷ, ಲಲಾಟ್ ಮೂರ್ತಿ, ಹೆಚ್.ಎನ್. ನಾಗೇಶ್, ಪುಟ್ಟಸ್ವಾಮಿ, ಅಮಿತ್ ಶೆಟ್ಟಿ, ಸೋಮಸೇಖರ್, ಸಾದಿಕ್, ಲೋಹಿತ್ ಕುಂದೂರು, ಈಶ್ವರಪ್ಪ, ಪ್ರಸನ್ನಕುಮಾರ್ ಇತರರು ಪಾಲ್ಗೊಂಡಿದ್ದರು.