ಸಿದ್ದರಾಮಯ್ಯ ಪಾರದರ್ಶಕ ಆಡಳಿತ ನೀಡಿದ್ದಾರೆ: ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ
ಕಡೂರು, ಮೇ 2: ರಾಜ್ಯದ ಜನತೆಗೆ ಅನ್ನಕೊಟ್ಟಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಮತ್ತೊಮ್ಮೆ ಬಲಪಡಿಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ತಿಳಿಸಿದರು.
ಬುಧವಾರ ಪಟ್ಟಣದ ಬನಶಂಕರಿ ಸಮುದಾಯಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಮಾದಿಗ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅವರು, ಬಡಜನತೆಗೆ ಉಚಿತವಾಗಿ ಅನ್ನ ನೀಡಿದ ಸಿದ್ದರಾಮಯ್ಯ ಅವರಿಗೆ ವಿಷ ಹಾಕದೆ ಮತ್ತೊಮ್ಮೆ ಉತ್ತಮ ಆಡಳಿತ ನಡೆಸಲು ನಾವೆಲ್ಲರೂ ಆರ್ಶೀವದಿಸಬೇಕಿದೆ. ಸತತ 5 ವರ್ಷಗಳ ಪಾರದರ್ಶಕತೆಯ ಜನಪರ ಆಡಳಿತ ನೀಡಿದ ಸರಕಾರವನ್ನು ಜನತೆ ಬೆಂಬಲಿಸಬೇಕಿದೆ. ಅಧಿಕಾರದ ಪೂರ್ವದಲ್ಲಿ ನೀಡಿದಂತಹ ಭರವಸೆಗಳನ್ನು ಈಡೇರಿಸಿ ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಶ್ರಮಿಸಿದ ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಹೈನುಗಾರಿಕೆಯಲ್ಲಿ ಸಾಕಷ್ಟು ಪ್ರಗತಿ ಹೊಂದಲು ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಮೂವರು ಮುಖ್ಯಮಂತ್ರಿಗಳಿಂದ ದಲಿತರನ್ನು ಉದ್ದಾರ ಮಾಡಲು ಆಗಲಿಲ್ಲ. ಕೇವಲ ಸುಳ್ಳು ಆಶ್ವಾಸನೆಗಳ ಮೂಲಕ ಮರುಳು ಮಾಡಿ ಅಪ್ರಚಾರದಲ್ಲಿ ತೊಡುಗುವುದೇ ಬಿಜೆಪಿಯ ಕೆಲಸವಾಗಿದೆ. ಸಂವಿಧಾನ ತಿದ್ದುಪಡಿಯಿಂದ ಸಮಾಜವನ್ನು ಒಡೆದು ಹಾಕುವ ಬಿಜೆಪಿಯನ್ನು ತಿರಸ್ಕರಿಸಿ ಸಮೃದ್ದ ಆಡಳಿತಕ್ಕೆ ಕಾಂಗ್ರೆಸ್ನ್ನು ಮತ್ತೊಮ್ಮೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯ್ಕುಮಾರ್ ಮಾತನಾಡಿ, ಎಲ್ಲಾ ಸಮಾಜದ ವರ್ಗದವರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಯತ್ನಿಸಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ದಿಗೆ ಒತ್ತು ನೀಡಿದ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ಸುಭದ್ರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಮುಂದಿನ ಬಾರಿಯೂ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ದಲಿತ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಿಷ್ಟವಾಗಿದ್ದು. ಯಾವುದೇ ರೀತಿಯ ಒಂದು ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಸೀಮಿತವಾಗಿಲ್ಲ. ಎಲ್ಲ ವರ್ಗದ ಜನತೆಯ ಸಹಕಾರದೊಂದಿಗೆ ಈ ಬಾರಿ ಕಡೂರಿನಲ್ಲಿ ಕಾಂಗ್ರೆಸ್ ಶಾಸಕನನ್ನು ಚುನಾಯಿಸುವ ಮೂಲಕ ಬದಲಾವಣೆ ತರಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತಸದಸ್ಯ ಕೆ.ಆರ್.ಮಹೇಶ್ಒಡೆಯರ್ ಮಾತನಾಡಿ, ಸುಳ್ಳು ಆಶ್ವಾಸನೆಗಳಿಂದ ಕ್ಷೇತ್ರದಲ್ಲಿ ನಾಲ್ಕುವರೆ ವರ್ಷ ಪೂರೈಸಿರುವ ಶಾಸಕ ವೈ.ಎಸ್.ವಿ. ದತ್ತ ಅವರ ಕೊಡುಗೆ ಶೂನ್ಯ. ಕೇವಲ ದಲಿತ ಸಮಾಜದ ಅಭಿವೃದ್ದಿಗೆ ನನ್ನ ಆದ್ಯತೆ ಎಂದು ಬಿಂಬಿಸಿಕೊಳ್ಳುತ್ತಿರುವ ಶಾಸಕರಿಗೆ ಸರಕಾರ ದಲಿತರಿಗೆ ಮಂಜೂರು ಮಾಡಿದ ಆಶ್ರಯ ಮತ್ತು ಬಸವ ವಸತಿ ಯೋಜನೆಗಳ 600 ಅರ್ಹ ಫಲಾನುಭವಿಗಳಿಗೆ ವಾಸಿಸುವ ಮನೆ ಸಿಗದೆ ಹಾಗೆಯೇ ವಾಪಾಸ್ ಹೋಗಿದೆ. ಕೇವಲ ಅವರ ಹಿಂಬಾಲಕರು ಹಣಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನೆಲ್ಲಿ ದಲಿತರನ್ನು ಉದ್ಧಾರ ಮಾಡಿದಂತಾಗಿದೆ. ಪಾದಯಾತ್ರೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನತೆಗೆ ನೀಡಿದ ಆಶ್ವಾಸನೆಗಳು ಮರೀಚಿಕೆಯಾಗಿವೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಆನಂದ್ ಮಾತನಾಡಿ, ದಲಿತ ಸಮಾಜದ ಮತಗಳೇ ಕಾಂಗ್ರೆಸ್ ಪಕ್ಷದ ಬೆನ್ನಲುಬು, ಸಮುದಾಯದ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷ ಸದಾ ಸಿದ್ದವಾಗಿದೆ. ಸತತ 4 ವರ್ಷಗಳ ಬರದಿಂದ ನಲುಗುತ್ತಿರುವ ಕಡೂರು ತಾಲೂಕಿಗೆ ಶಾಶ್ವತ ಯೋಜನೆಯನ್ನು ರೂಪಿಸುವ ನನ್ನ ಉದ್ದೇಶಕ್ಕೆ ನೀವೆಲ್ಲರೂ ಸಹಕರಿಸಿ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್, ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಚ್. ಚಂದ್ರಪ್ಪ, ಕೆ.ಎಂ. ವಿನಾಯಕ್, ಎಐಸಿಸಿ ವೀಕ್ಷಕರಾದ ಧನಪಾಲ್, ಜಿ.ಪಂ. ಸದಸ್ಯರಾದ ಶರತ್ಕೃಷ್ಣಮೂರ್ತಿ, ವನಮಾಲದೇವರಾಜ್, ಲೋಲಾಕ್ಷಿಬಾಯಿ, ತಾ.ಪಂ. ಸದಸ್ಯೆ ಭಾರತಿಪ್ರಹ್ಲಾದ್, ಮುಖಂಡರಾದ ಆರ್.ಎಂ.ಬಸವರಾಜ್, ಚಂದ್ರಶೇಖರ್, ಕೆ.ಜಿ.ಶ್ರೀನಿವಾಸ್ಮೂರ್ತಿ, ವಕ್ತಾರ ಬಾಸೂರು ಚಂದ್ರಮೌಳಿ ಮತ್ತಿತರಿದ್ದರು. ಈ ಸಂದರ್ಭದಲ್ಲಿ ಬೀರೂರು ಪುರಸಭೆಯ ಪಕ್ಷೇತರ ಸದಸ್ಯ ಎಸ್.ಕೆ. ರುದ್ರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡರು.