ಮೇ 5ರಂದು ಜಿಗ್ನೇಶ್ ಮೇವಾನಿ ರಾಯಚೂರಿಗೆ
ದಲಿತಪರ ಸಂಘಟನೆಯ ಮುಖಂಡರೊಂದಿಗೆ ಸಂವಾದ
ರಾಯಚೂರು. ಮೇ 3: ಕೋಮುವಾದಿಗಳಿಂದ ಸಂವಿಧಾನವನ್ನು ಸಂರಕ್ಷಿಸುವ ಸಲುವಾಗಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಭಾಗವಾಗಿ ಮೇ 5ರಂದು ರಾಯಚೂರು ನಗರದಲ್ಲಿ ದಲಿತ ಹಾಗೂ ಪ್ರಗತಿಪರ ಮುಖಂಡರೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ದಲಿತ ಮುಖಂಡ ಎಂ.ಆರ್.ಭೇರಿ ತಿಳಿಸಿದರು.
ನಗರದ ಜೆಪಿ ಭವನದಲ್ಲಿ ಮಧ್ಯಾಹ್ನ 2ಗಂಟೆಗೆ ಜಿಲ್ಲೆಯ ದಲಿತ ಮುಖಂಡರೊಂದಿಗೆ ಬಿಜೆಪಿಯಿಂದ ಸಂವಿಧಾನಕ್ಕಿರುವ ಅಪಾಯದ ಕುರಿತು ಚರ್ಚೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಂವಿಧಾನವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಭಾರತ ಸಂವಿಧಾನಕ್ಕೆ ಆಪತ್ತು ಎದುರಾಗಿದೆ. ಸ್ವಾತಂತ್ರ, ಸಮಾನತೆ ಹಾಗೂ ಬ್ರಾತೃತ್ವ ಹಾಗೂ ನ್ಯಾಯಾಂಗದ ವಿರುದ್ಧ ಹೋರಾಟ ನಡೆಯುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ನ್ಯಾಯಾಧೀಶರು ಕೋರ್ಟ್ನಿಂದ ಹೊರ ಬಂದು ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದರು.
ಜಾತಿ, ಧರ್ಮದ ಹಾಗೂ ಗೋಹತ್ಯೆ ಹೆಸರಿನಲ್ಲಿ ಕೋಮು ದಳ್ಳುರಿ ಹಚ್ಚುವವರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾಗಿದೆ. ಶಾಸಕ ಜಿಗ್ನೇಶ್ ಮೇವಾನಿ ದೇಶಾದ್ಯಂತ ತಿರುಗಾಡಿ ಸಂವಿಧಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದರ ಭಾಗವಾಗಿ ಮೇ 5ರಂದು ರಾಯಚೂರಿಗೆ ಆಗಮಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ವೇಳೆ ಹನುಮಂತು, ಖಾಝಾ ಅಸ್ಲಾಂ ಪಾಷಾ, ಜಾನ್ ವೆಸ್ಲಿ, ಮಾರಪ್ಪ ಮತ್ತಿತರರಿದ್ದರು.