ಸಚಿವ ಅನಂತಕುಮಾರ್ ಹೆಗಡೆ ಕಾರು ಅಪಘಾತ
ಕಾರವಾರ, ಮೇ 7: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯ ಕಾರು ಇಂದು ಬೆಳಗ್ಗೆ ಮತ್ತೆ ಅಪಘಾತಕ್ಕೀಡಾಗಿದೆ. ಸಚಿವರಿದ್ದ ಕಾರು ಕುಮಟಾ ತಾಲೂಕಿನ ಕತಗಾಲ ಎಂಬಲ್ಲಿ ತನ್ನದೇ ಬೆಂಗಾವಲು ವಾಹನಕ್ಕೆ ಢಿಕ್ಕಿಯಾಗಿದೆ. ಈ ಸಂದರ್ಭ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಸಚಿವರು ಶಿರಸಿಯಿಂದ ಹೊನ್ನಾವರದ ಕೆಕ್ಕಾರ ಎಂಬಲ್ಲಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇಲ್ಲಿನ ಯಾಣ ಕ್ರಾಸ್ ಬಳಿ ಓಮ್ನಿ ಕಾರೊಂದು ಅನಂತಕುಮಾರ ಹೆಗಡೆಯವರ ಬೆಂಗಾವಲು ವಾಹನಕ್ಕೆ ಅಡ್ಡ ಬಂತೆನ್ನಲಾಗಿದೆ. ಈ ವೇಳೆ ಬೆಂಗಾವಲು ವಾಹನದ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಅದರ ಬೆನ್ನಲ್ಲೇ ಇದ್ದ ಸಚಿವರ ಕಾರು ಬೆಂಗಾವಲು ವಾಹನಕ್ಕೆ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಚಿವರು ಸೇರಿದಂತೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಸಚಿವ ಅನಂತಕುಮಾರ್ ಹೆಗಡೆ ತೆರಳುತ್ತಿದ್ದ ವಾಹನ ಅಪಘಾತಕ್ಕಿಡಾಗಿತ್ತು. ಇದು ಬಳಿಕ ಭಾರೀ ವಿವಾದವನ್ನೇ ಸೃಷ್ಟಿಸಿತ್ತು.
Next Story