ಕಾಂಗ್ರೆಸಿಗರನ್ನು ನಿದ್ದೆ ಮಾಡಲು ಬಿಡುವುದಿಲ್ಲ: ಶಾಸಕ ಶ್ರೀರಾಮುಲು
ಬಳ್ಳಾರಿ, ಮೇ 20: ‘ಬಿಜೆಪಿಯನ್ನು ಸೋಲಿಸಿದ್ದೇವೆಂದು ಕಾಂಗ್ರೆಸ್-ಜೆಡಿಎಸ್ ಮುಖಂಡರು ಅಂದುಕೊಂಡಿರಬಹುದು. ಆದರೆ, ಕಾಂಗ್ರೆಸಿನರನ್ನು ನಿದ್ದೆ ಮಾಡಲು ಬಿಡುವುದಿಲ್ಲ. ಅವರ ಅಕ್ರಮಗಳನ್ನು ರಾಜ್ಯದ ಜನತೆ ಮುಂದಿಡುತ್ತೇವೆ’ ಎಂದು ಶಾಸಕ ಬಿ.ಶ್ರೀರಾಮುಲು ಗುಡುಗಿದ್ದಾರೆ.
ರವಿವಾರ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ನಾವು ಸೋತಿದ್ದೇವೆ. ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯನ್ನೂ ನೀಡಿದ್ದಾರೆ. ಆದರೆ, ಕಳೆದ ಬಾರಿ 122 ಸ್ಥಾನ ಗೆದಿದ್ದ ಕಾಂಗ್ರೆಸ್, 40 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ ಎಷ್ಟು ಗೆದ್ದಿವೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಛೇಡಿಸಿದರು.
ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನಗಳು ಬಂದಿದ್ದರೂ, ಸದನದಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ನಾವು ಸೋತಿದ್ದೇವೆ ಎಂದು ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ನಾವೆಲ್ಲಾ ಜೈಲಿಗೆ ಹೋಗುತ್ತೇವೆಂಬ ಕಾರಣಕ್ಕೆ ಕಾಂಗ್ರೆಸಿನವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ದೂರಿದರು.
ಭ್ರಷ್ಟಾಚಾರ ನಿಗ್ರಹಕ್ಕೆ ಸ್ಥಾಪಿಸಲಾಗಿದ್ದ ಲೋಕಾಯುಕ್ತ ಸಂಸ್ಥೆ ಅಧಿಕಾರವನ್ನು ಮೊಟಕುಗೊಳಿಸಿದ ಕಾಂಗ್ರೆಸ್ ಪಕ್ಷದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ದಿನದ 24 ಗಂಟೆಗಳು ಅವರನ್ನು ಕಾಯುತ್ತೇವೆ. ನೂತನ ಸರಕಾರ ರಚನೆಗೂ ಮೊದಲೆ ಮಂತ್ರಿಗಿರಿಗಾಗಿ ಒಳ ಜಗಳ ಪ್ರಾರಂಭವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೇಷರತ್ ಆಗಿ ಸಿಎಂ ಮಾಡಲು ಒಪ್ಪಿದ್ದಾರೆ. ಆ ಮೂಲಕ ಅವರ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಆದರೆ, ಬಿಜೆಪಿ ಇವರನ್ನು ಬಿಡುವುದಿಲ್ಲ, ಅಕ್ರಮಗಳನ್ನು ಜನತೆ ಮುಂದಿಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬೇಕೆಂಬ ಮಹದಾಸೆಯಿಂದ ನಿನ್ನೆ ಸದನದಲ್ಲಿ ವಿಶ್ವಾಸ ಮತಯಾಚನೆ ಹೋಗಿದ್ದೇವು. ಆದರೆ, ಭ್ರಷ್ಟ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾದವು. ಇದರಿಂದ ನಾವೇನೂ ಕಂಗೆಟ್ಟಿಲ್ಲ. ವಿಪಕ್ಷವಾಗಿ ಅವರಿಗೆ ಸದನದ ಒಳಗೆ ಮತ್ತು ಹೊರಗೆ ತಕ್ಕಪಾಠ ಕಲಿಸಲಿದ್ದೇವೆ ಎಂದು ಶ್ರೀರಾಮುಲು ಹೇಳಿದರು.