ಚಾಮರಾಜನಗರ: ಎರಡನೇ ದಿನಕ್ಕೆ ಕಾಲಿಟ್ಟ ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಚಾಮರಾಜನಗರ, ಮೇ. 23: ಗ್ರಾಮೀಣ ಅಂಚೆ ನೌಕರರ ಹಿತವನ್ನು ಕಾಪಾಡುವ ಹಾಗು ವೇತನ ಪರಿಷ್ಕರಣೆ ಸೇರಿದಂತೆ ಅನೇಕ ಶಿಫಾರಸ್ಸುಗಳ ಕಮಲೇಶ್ ಚಂದ್ರ ವರದಿಯನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಗ್ರಾಮೀಣ್ ಡಾಕ್ ಸೇವಕ್ ಯೂನಿಯನ್, ನ್ಯಾಷನಲ್ ಯೂನಿಯನ್ ಆಫ್ ಗ್ರಾಮೀಣ್ ಡಾಕ್ ಸೇವಕ್ ನಂಜನಗೂಡು ವಿಭಾಗದ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ನಗರದ ಕೇಂದ್ರ ಅಂಚೆ ಕಚೇರಿಯ ಅವರಣದಲ್ಲಿ ಇಂದು ಸಹ ನಂಜನಗೂಡು ವಿಭಾಗದ ವ್ಯಾಪ್ತಿಯಲ್ಲಿರುವ ಅಂಚೆ ನೌಕರರು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ನಗರದಲ್ಲಿ ಸಮಾವೇಶಗೊಂಡು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸಂಘಟನೆಯ ಪದಾಧಿಕಾರಿಗಳು, ನಮ್ಮ ಪ್ರತಿಭಟನೆಯ ಕೂಗು ದೆಹಲಿಯವರೆಗೆ ಮುಟ್ಟಿದೆ. ಪ್ರತಿಭಟನೆಯು ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನೌಕರರು ಸಂಘಟನೆಯನ್ನು ಇಷ್ಟು ಬಲಿಷ್ಟಗೊಳಿಸಿಕೊಳ್ಳಬೇಕು. ಇದು ನಮ್ಮೆಲ್ಲರ ಅಂತಿಮ ಹೋರಾಟವಾಗಿದ್ದು, ಯಾವುದೇ ಕಾರಣಕ್ಕೂ ನಮ್ಮ ಬೇಡಿಕೆ ಈಡೇರುವ ತನಕ ಪ್ರತಿಭಟನೆಯನ್ನು ವಾಪಸ್ ಪಡೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸಂಘಟನೆಯ ಪದಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಸಹ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಸೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ನೌಕರರು ಬೆಂಗಳೂರಿಗೂ ಸಹ ಆಗಮಿಸಬೇಕು ಎಂದು ಮನವಿ ಮಾಡಿದರು.
ಭಾರತೀಯ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ನೌಕರರಾಗಿ 2.75 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಅಂಚೆ ನೌಕರರ ಭತ್ಯೆ ಹೆಚ್ಚಿಸಲು, ಇತರೆ ಸೌಲಭ್ಯಗಳನ್ನು ನೀಡಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಪ್ರತ್ಯೇಕವಾಗಿ ಕಮಿಟಿ ನೇಮಕ ಮಾಡಿ ಭತ್ಯೆಯನ್ನು ಪರಿಷ್ಕರಿಸುತ್ತದೆ. ಕಮಲೇಶ್ ಚಂದ್ರ ಕಮಿಟಿಯು ಜಿಡಿಎಸ್ ನೌಕರರಿಗೆ ಭತ್ಯೆಯನ್ನು ಪರಿಷ್ಕರಿಸಿ ಕಮಿಟಿಯ ಸಂಪೂರ್ಣ ವರದಿಯನ್ನು 2011 ಸೆ. 24 ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕಮಲೇಶ್ ಚಂದ್ರ ವರದಿಯ ಶಿಫಾರಸ್ಸುಗಳನ್ನು ಮತ್ತೆ ಪರಿಷ್ಕರಿಸಿ ಸರಳೀಕರಣಗೊಳಿಸಲು ಉಪ ಸಮಿತಿಯನ್ನು ಸಹ ಮಾಡಿತ್ತು. ಇದುವರೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಭಾರತೀಯ ಅಂಚೆ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಮತ್ತು ಡಿಜಿಎಸ್ ನೌಕರರಿಗೆ ವರದಿಯ ಅನುಷ್ಠಾನ ಮಾಡಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಗ್ರಾಮೀಣ ಡಾಕ್ ಸೇವಕ್ ಯೂನಿಯನ್ ಗೌರವ ಜಿಲ್ಲಾಧ್ಯಕ್ಷ ಶೇಖಣ್ಣ, ಅಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ಶಿವಣ್ಣ, ಕಾರ್ಯಾಧ್ಯಕ್ಷ ಚಿನ್ನಸ್ವಾಮಿ, ಉಪಾಧ್ಯಕ್ಷ ರೇವಣ್ಣಸಿದ್ದಪ್ಪ, ಕಾನೂನು ಸಲಹೆ ಮಹದೇವಯ್ಯ, ಲೆಕ್ಕಪರಿಶೋಧಕ ಶಾಂತೇಶ್ ಆಲತ್ತೂರು, ಕೊಳ್ಳೇಗಾಲ ತಾಲೂಕು ಗೌರವ ಅಧ್ಯಕ್ಷ ಮಂಚಪುರಮಾದೇಶ್, ಅಧ್ಯಕ್ಷ ರಾಜರಾಮ್, ಕಾರ್ಯದರ್ಶಿ ಮಾದೇಶ್, ನಿಜಲಿಂಗಮೂರ್ತಿ, ಗಾಯತ್ರಿ, ಶಿವಣ್ಣ, ರಾಜರಾಂ, ಪಾಳ್ಯ ಮಹೇಶ್, ಕೋಣನೂರು ಸಂಪತ್ತು, ಆಲೂರು ಮಹದೇವಯ್ಯ, ಹರವೆ ಪರಶಿವಪ್ಪ, ಕಲ್ಪುರ ರಾಜಣ್ಣ ಮೊದಲಾದವರು ಇದ್ದರು.