ಆರೋಗ್ಯ ಜಾಗೃತಿಯಿಂದ ಅತಿಸಾರಭೇದಿ ನಿಯಂತ್ರಣ: ಡಾ.ಆರ್.ಎಂ. ದೊಡ್ಡಮನಿ
ಧಾರವಾಡ, ಮೇ.28: ತಾಯಂದಿರಿಗೆ ಮತ್ತು ಪಾಲಕರಿಗೆ ಆರೋಗ್ಯ ಜಾಗೃತಿ ಮೂಡಿಸುವುದರಿಂದ ಮಾತ್ರ, ಅತಿಸಾರಭೇಧಿ ಹಾಗೂ ಅದರಿಂದ ಉಂಟಾಗುವ ಮರಣಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ಎಂ.ದೊಡ್ಡಮನಿ ಹೇಳಿದ್ದಾರೆ.
ಸೋಮವಾರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ನವಜಾತ ಶಿಶು ಚಿಕಿತ್ಸಾ ವಾರ್ಡ್ನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಯೋಜಿಸಿರುವ ತೀವ್ರತರ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ-2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಅಭಿಯಾನದಡಿಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಹಾಗೂ ಗರ್ಭಿಣಿಯರ ಆರೋಗ್ಯಕ್ಕಾಗಿ ಅನೇಕ ಮಹತ್ತರ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ತೀವ್ರತರ ಅತಿಸಾರಭೇದಿಯಿಂದ ದೇಶದಲ್ಲಿ ಅನೇಕ ಮರಣಗಳು ಸಂಭವಿಸುತ್ತವೆ. ಇದಕ್ಕೆ ಮುಖ್ಯವಾಗಿ ಜನರಿಗೆ ಆರೋಗ್ಯ ತಿಳುವಳಿಕೆಯ ಕೊರತೆ ಕಾರಣವಾಗಿದೆ ಎಂದು ಅವರು ಹೇಳಿದರು.
ಅತಿಸಾರಭೇದಿಯನ್ನು ನಿಲ್ಲಿಸಲು ಓ.ಆರ್.ಎಸ್ ಮತ್ತು ಝಿಂಕ್ ಮಾತ್ರೆಗಳು ಬಹುಮುಖ್ಯ. ಓ.ಆರ್.ಎಸ್ ಅನ್ನು ಅತಿಸಾರಭೇದಿ ನಿಲ್ಲುವವರೆಗೆ ನೀಡುವ ಮೂಲಕ ನಿರ್ಜಲೀಕರಣವನ್ನು ದೂರವಾಗಿಸಬೇಕು. ಝಿಂಕ್ ಮಾತ್ರೆಗಳನ್ನು 14 ದಿನಗಳ ವರೆಗೆ ಪ್ರತಿದಿನ ಒಂದರಂತೆ ನೀಡುವುದರಿಂದ ಶಕ್ತಿಯನ್ನು ಹೆಚ್ಚಿಸಬಹುದು. ಈ ಕ್ರಮ ಅನುಸರಿಸುವುದರಿಂದ ಅತಿಸಾರಭೇದಿಯಿಂದ ಆಗುವ ಜೀವಹಾನಿ ತಪ್ಪಿಸಬಹುದು ಎಂದು ಅವರು ತಿಳಿಸಿದರು.
ಮೇ 28 ರಿಂದ ಜೂ.9ರವರೆಗೆ ಆಚರಿಸುವ ಈ ಪಾಕ್ಷಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಐದು ತಾಲೂಕುಗಳ 2,47,789 ಮಕ್ಕಳಿಗೆ ಓ.ಆರ್.ಎಸ್. ಹಾಕುವ ಮತ್ತು ಝಿಂಕ್ ಮಾತ್ರೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ದೊಡ್ಡಮನಿ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಪಿಡಿಯಾಟ್ರಿಕ್ ವಿಭಾಗದಲ್ಲಿ ಚಿಕ್ಕ ಮಕ್ಕಳೊಂದಿಗೆ ಇರುವ ತಾಯಂದಿರಿಗೆ ಹಾಗೂ ಪಾಲಕರಿಗೆ ಓ.ಆರ್.ಎಸ್. ತಯಾರಿಸುವ ಕ್ರಮವನ್ನು ಡಾ.ಅಚ್ಯುತ ಹಾಗೂ ಹಿರಿಯ ಶುಶ್ರೂಷಕಿ ಸುಮಲತಾ ಅವರು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಗಿರಿಧರ ಕುಕನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಜ್ಞವೈದ್ಯರಾದ ಡಾ.ಸಿ.ಆರ್.ನಾಡಗೌಡ, ಡಾ. ಶೆಪೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ. ಎಚ್.ಓ ಆಗಿರುವ ಡಾ. ಎಚ್.ಆರ್.ಪುಷ್ಪಾ,ಆರೋಗ್ಯ ಶಿಕ್ಷಣ ಅಧಿಕಾರಿ ಎಲ್.ಎಸ್.ಅಂಬಲಿ ಉಪಸ್ಥಿತರಿದ್ದರು.