ಮಡಿಕೇರಿ: ಆಕಾಶವಾಣಿ ವಸತಿಗೃಹದಲ್ಲಿ ಸರಣಿ ಕಳ್ಳತನ
ಮಡಿಕೇರಿ, ಜೂ.5: ನಗರದ ಆಕಾಶವಾಣಿ ಕೇಂದ್ರದ ವಸತಿಗೃಹದಲ್ಲಿ ಸರಣಿ ಕಳ್ಳತನ ನಡೆದಿದೆ. ಮೂರು ಮನೆಗಳ ಬಾಗಿಲಿನ ಬೀಗ ಮುರಿದಿರುವ ಚೋರರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿರುವ ಬಾಲನ್ ಎಂಬುವರ ಮನೆಯಲ್ಲಿದ್ದ 1 ಲ್ಯಾಪ್ಟಾಪ್, 40 ಸಾವಿರ ನಗದು ಹಾಗೂ 3 ಹಾರ್ಡ್ಡಿಸ್ಕ್ ಗಳನ್ನು ಕದ್ದೊಯ್ದಿದ್ದಾರೆ.
ಬಾಲನ್ ಕಾರ್ಯನಿಮಿತ್ತ ಪರ ಊರಿಗೆ ತೆರಳಿದ ಸಂದರ್ಭ ಈ ಘಟನೆ ನಡೆದಿದೆ. ಆಕಾಶವಾಣಿ ನಿವೃತ್ತ ಅಧಿಕಾರಿ ರಾಘವೇಂದ್ರ ಹಾಗೂ ಹಾಲಿ ಕರ್ತವ್ಯದಲ್ಲಿರುವ ರಾಮನಾಯಕ್ ಎಂಬುವರ ಮನೆಯಲ್ಲೂ ಹಣ ಮತ್ತು ಚಿನ್ನಾಭರಣಗಳಿಗಾಗಿ ಕಳ್ಳರು ಶೋಧ ನಡೆಸಿರುವುದು ಕಂಡು ಬಂದಿದೆ. ರಾಮನಾಯಕ್ ಎಂಬುವರ ಮನೆಯ ಬಾಗಿಲನ್ನೇ ಒಡೆದು ಹಾಕಿ ಕಳ್ಳರು ಒಳನುಗ್ಗಿದ್ದಾರೆ.
ರಾತ್ರಿ 1 ಗಂಟೆಯಿಂದ ಬೆಳಗ್ಗಿನ 3 ಗಂಟೆಯ ಸಮಯದಲ್ಲಿ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಸತಿಗೃಹದ ಪೂರ್ವಾಪರ ಮಾಹಿತಿ ತಿಳಿದವರಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.