ಹಾಸನ: 7 ದಿನಗಳ ಮಾವು ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ
ಹಾಸನ,ಜೂ.05: ನಗರದ ಹಳೆ ಬಸ್ನಿಲ್ದಾಣದ ಆವರಣದಲ್ಲಿ ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 7 ದಿನಗಳ ಮಾವು ಮೇಳಕ್ಕೆ ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಚಾಲನೆ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿ, ರಾಸಾಯನಿಕ ಪದಾರ್ಥಗಳನ್ನು ಬಳಸಿ ಹಣ್ಣು ಮಾಡದೇ ನೈಸರ್ಗಿಕವಾಗಿ ಹಣ್ಣಾದ ಮಾವನ್ನು ಮಾರಾಟ ಮಾಡಬೇಕು. ರೈತರು ಬೆಳೆಯುವ ಮಾವಿನ ಹಣ್ಣಿನ ಬಗ್ಗೆ ಇಲಾಖೆಯಿಂದ ಸರಿಯಾದ ಮಾಹಿತಿ ನೀಡಬೇಕು ಎಂದರು.
ಸುಧಾರಿತ ಮಾವು ತಳಿಗಳಾದ ಅಲ್ಫಾನ್ಸೋ, ಬಾದಾಮಿ, ಮಲ್ಲಿಕಾ, ರಸಪುರಿ, ಸೇಂದೂರ, ದಶಹರಿ, ಕೇಸರ್, ನೀಲಮ್, ಮಲ್ಗೋವ ಮೊದಲಾದ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರಿನಿಂದ 10 ಜನ ಪ್ರಗತಿಪರ ಮಾವು ಹಾಗೂ ಹಲಸು ಬೆಳೆಯುವ ರೈತರು ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಅತ್ಯಂತ ಕಡಿಮೆ ಬೆಳೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮೇಳದಲ್ಲಿ ಒಟ್ಟು 12 ಮಳಿಗೆಯನ್ನು ಕಲ್ಪಿಸಲಾಗಿದೆ ಎಂದು ವಿವರ ನೀಡಿದರು. ಇಂದಿನಿಂದ ಜೂನ್ 11ರ ವರೆಗೂ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಡಿಎಚ್ಓ ವೆಂಕಟೇಶ್ ಇತರರು ಪಾಲ್ಗೊಂಡಿದ್ದರು.