ಮೋದಿ ಮೇಲೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಪೇಜಾವರ ಶ್ರೀ ಉತ್ತರಿಸಿದ್ದು ಹೀಗೆ..
ಮೈಸೂರು,ಜೂ.6: ನನಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಅಸಮಾಧಾನ ಇಲ್ಲ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ ಎಂದು ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಮೋದಿ ಮೇಲೆ ಅಸಮಾಧಾನ ಇಲ್ಲ. ಕೆಲ ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಕೇಂದ್ರದ ಯೋಜನೆಗಳು ಸಮಾಧಾನ ತಂದಿಲ್ಲ ಎಂದು ನಾನು ಹೇಳಿಲ್ಲ. ಕಪ್ಪು ಹಣ, ಗಂಗಾ ನದಿ ಶುದ್ಧೀಕರಣ ಆಗಿಲ್ಲ ಎನ್ನುವ ವಿಚಾರ ಇಟ್ಟುಕೊಂಡು ಮಾತನಾಡಿದ್ದೇನೆ. ಸಂಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ ಎಂದು ಹೇಳಿದ್ದೆ. ಈ ಮಾತಿನಿಂದ ಕೇಂದ್ರ ಸರಕಾರದ ಉತ್ತೇಜನ ಮಾಡುವ ಉದ್ದೇಶವಿದೆ ಎಂದರು.
ಕೆಲ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ ಮಾತ್ರ ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರಕ್ಕೆ ಇನ್ನೂ ಒಂದು ವರ್ಷ ಕಾಲಾವಾಕಾಶ ಇದೆ. ಈ ಅವಧಿಯಲ್ಲಿ ಇನ್ನೂ ಸಾಧನೆ ಮಾಡಬಹದು ಎಂದು ಹೇಳಿದರು.