ಕೋಮುವಾದಿಗಳ ಕಪಿಮುಷ್ಠಿಯಲ್ಲಿ ವಿಧಾನಸೌಧ: ವಾಟಾಳ್ ನಾಗರಾಜ್
ಬೆಂಗಳೂರು, ಜೂ.19: ಕರ್ನಾಟಕ ವಿಧಾನ ಪರಿಷತ್ ಹಾಗೂ ವಿಧಾನಸಭೆಗಳು ಇಂದು ಕೋಮುವಾದಿಗಳ, ಹಣವಂತರ, ವ್ಯಾಪಾರಸ್ಥರ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಹೇಳಿದರು.
ಮಂಗಳವಾರ ಕನ್ನಡ ಸೇನೆ ಅಧ್ಯಕ್ಷ ಕೆ.ಆರ್.ಕುಮಾರ್ ನೆಲಮಂಗಲದಲ್ಲಿ ಆಯೋಜಿಸಿದ್ದ, ಕನ್ನಡ ಚಳುವಳಿಯ ಇಂದಿನ ಸ್ಥಿತಿ-ಗತಿ ಬಗ್ಗೆ ವಿಚಾರ ಸಂಕಿರಣ ಹಾಗೂ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಕನ್ನಡಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಉಳಿಸಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಕನ್ನಡ ಉಳಿವಿಗಾಗಿ ಎಲ್ಲರೂ ಒಟ್ಟಾಗಿ ನಿರಂತರ ಹೋರಾಟ ಮಾಡಬೇಕಾಗಿದೆ. ಇದಕ್ಕಾಗಿ ನಾವುಗಳು ಜೈಲಿಗೆ ಹೋಗಲು ಸಿದ್ಧ ಎಂದು ತಿಳಿಸಿದರು.
ಹೋರಾಟಗಾರ ಕುಮಾರ್ ಅವರು ಅಜಾತ ಶತ್ರು. ಅವರು ನಮ್ಮ ಹೋರಾಟಗಳಿಗೆ ಒಂದು ಶಕ್ತಿ ಇದ್ದಂತೆ. ಪರಿಶುದ್ಧ ಮನಸ್ಸು, ಪ್ರಾಮಾಣಿಕತೆ, ನಿಷ್ಠೆ ಇವುಗಳ ಹೂರಣವಾಗಿರುವ ಇವರು ತಮ್ಮ ಗುಣಗಳಿಂದಲೇ ರಾಜ್ಯದುದ್ದಗಲಕ್ಕೂ ಸಹಸ್ರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದು ಶ್ಲಾಘಿಸಿದರು.