ಜು.21ರಂದು ಮಂಗಳೂರಿನಿಂದ ಮೊದಲ ಪ್ರಯಾಣ: ಸಚಿವ ಝಮೀರ್ ಅಹ್ಮದ್
ಹಜ್ ಯಾತ್ರೆ-2018
ಬೆಂಗಳೂರು, ಜೂ.21: 2018ನೆ ಸಾಲಿನ ಪವಿತ್ರ ಹಜ್ ಯಾತ್ರೆಗೆ ರಾಜ್ಯದಿಂದ ತೆರಳಲಿರುವ ಯಾತ್ರಿಗಳ ಮೊದಲ ವಿಮಾನವು ಜು.21ರಂದು ಮಂಗಳೂರಿನಿಂದ ಪ್ರಯಾಣ ಬೆಳಸಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು
ನಗರದ ರಿಚ್ಮಂಡ್ ಟೌನ್ನಲ್ಲಿರುವ ರಾಜ್ಯ ಹಜ್ ಸಮಿತಿಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಿಂದ ಒಟ್ಟು ಮೂರು ವಿಮಾನಗಳು ಪ್ರಯಾಣ ಬೆಳೆಸಲಿವೆ ಎಂದರು.
ಬೆಂಗಳೂರು ವಿಮಾನ ನಿಲ್ದಾಣದಿಂದ ಆಗಸ್ಟ್ 1 ರಿಂದ 15ರವರೆಗೆ ಒಟ್ಟು 15 ವಿಮಾನಗಳ ಮೂಲಕ ಯಾತ್ರಿಗಳು ಹಜ್ ಯಾತ್ರೆಗೆ ತೆರಳಲಿದ್ದಾರೆ. ಜು.31ರಂದು ಸಂಜೆ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ವಿಮಾನಗಳ ಪ್ರಯಾಣದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಜ್ಯಾತ್ರಿಗಳ ವಿಮಾನ ಪ್ರಯಾಣದ ಉದ್ಘಾಟನೆ ನೆರವೇರಿಸಲಿದ್ದು, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ಸೇರಿದಂತೆ ಇನ್ನಿತರ ರಾಷ್ಟ್ರೀಯ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಗುಲ್ಬರ್ಗ ಭಾಗದ 540 ಯಾತ್ರಿಗಳು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ಆಗಸ್ಟ್ 1ರಿಂದಲೇ ಪ್ರಯಾಣ ಬೆಳೆಸಲಿದ್ದಾರೆ. ಬೆಳಗಾವಿ ಭಾಗದ ಯಾತ್ರಿಗಳು ಗೋವಾ ವಿಮಾನ ನಿಲ್ದಾಣದ ಮೂಲಕ ಜು.26 ರಿಂದ 28ರವರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರು ಹೇಳಿದರು.
ಈ ಬಾರಿ ರಾಜ್ಯದಿಂದ ಹಜ್ಯಾತ್ರೆಗೆ ತೆರಳಲು ಸುಮಾರು 18 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರಕಾರವು ನಮ್ಮ ರಾಜ್ಯಕ್ಕೆ ನಿಗದಿಪಡಿಸಿದ್ದ 6624 ಮಂದಿಯ ಕೋಟಾವನ್ನು ಲಾಟರಿ ಹಾಗೂ ಮೀಸಲಾತಿ ವರ್ಗದ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಝಮೀರ್ಅಹ್ಮದ್ ತಿಳಿಸಿದರು.
ಹೊಸದಿಲ್ಲಿಯಲ್ಲಿ ಜು.29 ಹಾಗೂ 30ರಂದು ದೇಶದ ಎಲ್ಲ ರಾಜ್ಯಗಳ ಆಹಾರ ಸಚಿವರ ಸಭೆಯನ್ನು ಕೇಂದ್ರ ಸರಕಾರ ಕರೆದಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ತಾನು ತೆರಳುತ್ತಿದ್ದು, ಇದೇ ಸಂದರ್ಭದಲ್ಲಿ ರಾಜ್ಯದ ಹಜ್ ಯಾತ್ರಿಗಳಿಗೆ ಹೆಚ್ಚುವರಿ ಕೋಟಾವನ್ನು ಪಡೆಯುವ ಸಂಬಂಧ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಿಂದ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಿಗಳಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ. ಇದರಿಂದಾಗಿ, ಪವಿತ್ರ ಯಾತ್ರೆಗೆ ತೆರಳುತ್ತಿರುವವರ ಮೇಲೆ ಹೆಚ್ಚುವರಿ ಹೊರೆಯಾಗುತ್ತಿದೆ ಎಂಬುದು ನನ್ನ ಭಾವನೆ. ಈ ಸಂಬಂಧ ಕೇಂದ್ರ ಸಚಿವರು ಹಾಗೂ ಭಾರತೀಯ ಹಜ್ ಸಮಿತಿ ಜೊತೆ ಚರ್ಚೆ ನಡೆಸಲಾಗುವುದು ಎಂದು ಝಮೀರ್ ಅಹ್ಮದ್ ಹೇಳಿದರು.
ರಿಚ್ಮಂಡ್ ಟೌನ್ನಲ್ಲಿರುವ ರಾಜ್ಯ ಹಜ್ ಸಮಿತಿಯ ಕಚೇರಿಯ ಕಟ್ಟಡವು ಹಳೆಯದಾಗಿದ್ದು, ಈ ಸಾಲಿನ ಹಜ್ ಯಾತ್ರೆಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ಕಚೇರಿಯನ್ನು ನೂತನ ಹಜ್ ಭವನಕ್ಕೆ ಸ್ಥಳಾಂತರಿಸಲಾಗುವುದು. ಆನಂತರ, ಈ ಜಾಗದಲ್ಲಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಸಮುದಾಯದ ಹಿರಿಯ ಮುಖಂಡರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.