ಪ್ರೊ.ಮಹೇಶ್ ಚಂದ್ರಗುರು, ಅರವಿಂದ ಮಾಲಗತ್ತಿ ಅಮಾನತು ಆದೇಶ ರದ್ದು
ಮೈಸೂರು ವಿ.ವಿ ಸಿಂಡಿಕೇಟ್ ಸಭೆ ನಿರ್ಧಾರ
ಅರವಿಂದ ಮಾಲಗತ್ತಿ, ಮಹೇಶ್ ಚಂದ್ರಗುರು
ಮೈಸೂರು,ಜೂ.26: ಚುನಾವಣಾ ಪೂರ್ವ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಪರ ಭಾಷಣ ಮಾಡಿದರೆಂಬ ಆರೋಪದಡಿ ಪ್ರೊ.ಮಹೇಶ್ ಚಂದ್ರಗುರು ಮತ್ತು ಡಾ.ಅರವಿಂದ ಮಾಲಗತ್ತಿ ಅವರನ್ನು ಅಮಾನತುಗೊಳಿಸಿದ್ದ ಆದೇಶವನ್ನು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ವಾಪಸ್ ಪಡೆದಿದೆ. ಅಲ್ಲದೆ, ಮಹೇಶ್ ಚಂದ್ರಗುರು ಮತ್ತು ಅರವಿಂದ ಮಾಲಗತ್ತಿ ಇಬ್ಬರೂ ಕರ್ತವ್ಯಕ್ಕೆ ಹಾಜರಾಗುವಂತೆ ವಿವಿ ಕುಲಸಚಿವರು ಸೂಚಿಸಿದ್ದಾರೆ.
ಕಳೆದ ಎ.14 ರಂದು ಆಯೋಜಿಸಿದ್ದ 'ಜನ ರಾಜಕಾರಣ ಪ್ರಚಾರಾಂದೋಲನ'ದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮತ ನೀಡುವಂತೆ ಈ ಇಬ್ಬರೂ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಇಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಿದ್ದರು. ಇಬ್ಬರಿಗೂ ವಿವಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಬಳಿಕ ಸಮಂಜಸ ಉತ್ತರ ನೀಡಿಲ್ಲ ಎಂದು ಸೇವೆಯಿಂದ ಅಮಾನತುಗೊಳಿಸಿತ್ತು.
ಬಳಿಕ ಅವರಿಬ್ಬರ ವಿಚಾರಣೆ ನಡೆಸಲು ವಿವಿ ಅನುಮೋದನೆ ಅಗತ್ಯವಾಗಿದ್ದರಿಂದ ಪ್ರಕರಣವನ್ನು ನಿಯಮಾನುಸಾರ ಸಿಂಡಿಕೇಟ್ ಸಭೆ ಮಂಡಿಸಲಾಗಿತ್ತು. ಜೂ.21ರ ಸಿಂಡಿಕೇಟ್ ಸಭೆಯಲ್ಲಿ ಇಬ್ಬರೂ ಪ್ರಾಧ್ಯಾಪಕರ ಅಮಾನತು ಆದೇಶ ರದ್ದುಗೊಳಿಸಲು ತೀರ್ಮಾನಿಸಲಾಯಿತು.