ಮಾನಸ ಸರೋವರ ಯಾತ್ರೆ ತೆರಳಿದ ತರೀಕೆರೆಯ ಯುವಕ ನಾಪತ್ತೆ?
ಚಿಕ್ಕಮಗಳೂರು, ಜು.3: ನೇಪಾಳದ ಕೈಲಾಸದಲ್ಲಿರುವ ಮಾನಸ ಸರೋವರ ಯಾತ್ರೆಗೆ ತೆರಳಿರುವ ತರೀಕೆರೆಯ ನಿವಾಸಿಯೋರ್ವ ಕಳೆದೆರಡು ದಿನಗಳಿಂದ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬುಕ್ಕಂಬುದಿ ನಿವಾಸಿ ದರ್ಶನ್ ನಾಪತ್ತೆಯಾಗಿರುವ ಯುವಕ. ಇವರು ದೇವಾಲಯವೊಂದರ ಪುರೋಹಿತರಾಗಿದ್ದರು. ದರ್ಶನ್ ಜೂನ್ 21ರಂದು ಬೆಂಗಳೂರಿನಿಂದ ಉತ್ತರ ಭಾರತ ಪ್ರವಾಸ ಹೊರಟಿದ್ದರು. ರವಿವಾರ ರಾತ್ರಿ ಅವರು ತನ್ನ ಸಹೋದರ ಪ್ರಶಾಂತ್ಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿದ್ದರು. ಈ ವೇಳೆ ತಾನು ಶ್ರೀ ನಗರ, ಲಡಾಕ್, ಕೈಲಾಸ ಪರ್ವತವನ್ನು ವೀಕ್ಷಿಸಿ ಬಳಿಕ ಮಾನಸ ಸರೋವರ ಯಾತ್ರೆಗೆ ತೆರಳುತ್ತಿರುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಆದರೆ ಸೋಮವಾರದಿಂದ ದರ್ಶನ್ ಮನೆಮಂದಿಯ ಸಂರ್ಪಕಕ್ಕೆ ಸಿಗುತ್ತಿಲ್ಲ. ಇದು ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ.
ಮಾನಸ ಸರೋವರ ಯಾತ್ರೆಯ ದಾರಿಮಧ್ಯೆ ಭಾರೀ ಮಳೆಯಿಂದ ಭೂ ಕುಸಿತ ಉಂಟಾಗಿದೆ. ಇದರಲ್ಲಿ ಭಾರತೀಯರ ಸಹಿತ ಒಂದೂವರೆ ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ.