ಬಾಣಂತಿ ಸಾವು ಪ್ರಕರಣ: ಖಾಸಗಿ ನರ್ಸಿಂಗ್ ಹೋಂ ವೈದ್ಯೆಯ ವಿರುದ್ಧ ವಿರಾಜಪೇಟೆಯಲ್ಲಿ ಪ್ರತಿಭಟನೆ
ಮಡಿಕೇರಿ, ಜು.11: ಮಗುವಿಗೆ ಜನ್ಮವಿತ್ತ ತಾಯಿಯ ಸಾವಿಗೆ ಖಾಸಗಿ ನರ್ಸಿಂಗ್ ಹೋಂನ ವೈದ್ಯೆ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿರಾಜಪೇಟೆ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು.
ಸಮೀಪದ ಮರಂದೋಡ ಗ್ರಾಮದ ಕೀರ್ತನ್ ಕಾರ್ಯಪ್ಪ ಅವರ ಪತ್ನಿ ಲಾಸ್ಯ ತೇಜಸ್ವಿ (26) ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ವೀರಾಜಪೇಟೆಯ ಖಾಸಗಿ ನರ್ಸಿಂಗ್ ಹೋಮ್ಗೆ ದಾಖಲು ಮಾಡಲಾಗಿತ್ತು. ಜು.2ರ ಬೆಳಗ್ಗೆ 9 ಗಂಟೆಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರೂ, ಮಧ್ಯಾಹ್ನ 1.15ರವರೆಗೆ ಆಕೆಯನ್ನಾಗಲಿ, ಮಗುವನ್ನಾಗಲಿ ನೋಡಲು ಬಿಡದ ವೈದ್ಯರು ಹಾಗೂ ಸಿಬ್ಬಂದಿಗಳು ಬಳಿಕ 1.30ಕ್ಕೆ ಬಿಡುಗಡೆ ಪತ್ರ ನೀಡಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ಆಕೆಯ ಸಂಬಂಧಿಕರು ಹಾಗೂ ಪ್ರತಿಭಟನಾಕಾರರು ಆರೋಪಿಸಿದರು.
ನಿಗದಿತ ಸಮಯದಲ್ಲಿ ಆಕೆಗೆ ಸೂಕ್ತ ಚಿಕಿತ್ಸೆ ದೊರೆಯದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಲಾಸ್ಯ ತೇಜಸ್ವಿಯನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿದಾಗ ವೀರಾಜಪೇಟೆಯ ವೈದ್ಯರು ಮಹಿಳೆಯ ‘ರಕ್ತಸ್ರಾವವನ್ನು ತಡೆಯಲು ವಿಳಂಬವಾಗಿದ್ದರಿಂದ ಆಕೆ ಸಾವು ಬದುಕು ಹೋರಾಟದಲ್ಲಿರುವುದನ್ನು ಮಡಿಕೇರಿಯ ವೈದ್ಯರು ಖಚಿತಪಡಿಸಿದ್ದಾರೆ. ಅಲ್ಲದೆ ವೀರಾಜಪೇಟೆಯ ವೈದ್ಯರ ನಿರ್ಲಕ್ಷ್ಯತೆ ಬಗ್ಗೆ ಪತಿ ಕೀರ್ತನ್ ಕಾರ್ಯಪ್ಪ ಅವರಿಗೂ ತಿಳಿಸಿದ್ದಾರೆ. ನಂತರ ಜು. 3 ರಂದು ಬೆಳಗಿನ ಜಾವ 4-30ರ ವೇಳೆಗೆ ಲಾಸ್ಯ ತೇಜಸ್ವಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ನರ್ಸಿಂಗ್ ಹೋಂನ ಪರವಾನಗಿಯನ್ನು ರದ್ದುಗೊಳಿಸುವಂತೆ ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಕುಟ್ಟಪ್ಪ, ಗ್ರಾಮದ ಕೊಡವ ಸಂಘದ ಅಧ್ಯಕ್ಷ ಅನ್ನಡಿಯಂಡ ದಿಲೀಪ್ ಕುಮಾರ್, ಮರಂದೋಡ ರಿಕ್ರಿಯೇಷನ್ ಕ್ಲಬ್ನ ಎಂ.ಪ್ರವೀಣ್, ಮುದ್ದಯ್ಯ, ಹರೀಶ್ ಮೊಣ್ಣಯ್ಯ, ಕುಟುಂಬಸ್ಥರದ ಸೋನಿ, ಪಿ.ಮಾಚಯ್ಯ , ಪಿ.ಕಮಲ ಸುಬ್ಬಯ್ಯ, ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು, ಸ್ವ-ಸಹಾಯ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.