ಚಿಕ್ಕಮಗಳೂರು: ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಗೆ ಶಾಸಕ ರವಿ ದಿಢೀರ್ ಭೇಟಿ
ರೋಗಿಗಳಿಂದ ದೂರುಗಳ ಮಹಾಪೂರ
ಚಿಕ್ಕಮಗಳೂರು, ಆ.6: ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆ ಹಾಗೂ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಸಿ.ಟಿ.ರವಿ, ಆಸ್ಪತ್ರೆಯ ಅವ್ಯವಸ್ಥೆ ಸಮಸ್ಯೆ ಹಾಗೂ ಕುಂದು ಕೊರತೆಗಳ ಬಗ್ಗೆ ರೋಗಿಗಳು ಮತ್ತು ವೈದ್ಯರು, ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ಸೋಮವಾರ ಬೆಳಗ್ಗೆ ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜ್ಶೇಖರ್, ಆಯುಕ್ತೆ ತುಷಾರ ಮಣಿ, ಸದಸ್ಯರಾದ ದೇವರಾಜ್ಶೆಟ್ಟಿ, ರಾಜ್ಶೇಖರ್, ಬಿಜೆಪಿ ಮುಖಂಡರಾದ ಪ್ರೇಮ್ ಕುಮಾರ್, ವರಸಿದ್ದಿ ವೇಣುಗೋಪಾಲ್ ಮತ್ತಿತರ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರೊಂದಿಗೆ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರವಿ, ಆಸ್ಪತ್ರೆಯಲ್ಲಿ ಕುಡಿಯುವ ನೀರು, ಶುಚಿತ್ವ, ಉದರದರ್ಶಕ ಶಸ್ತ್ರಚಿಕಿತ್ಸೆ ವಿಭಾಗ, ಸಿ.ಟಿ.ಸ್ಕ್ಯಾನ್ ಸೆಂಟರ್, ಶಸ್ತ್ರಚಿಕಿತ್ಸ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲ ರೋಗಿಗಳು, ಪೋಷಕರು, ಮಹಿಳೆಯರಿಂದ ಆಸ್ಪತ್ರೆ ವೈದ್ಯರು ಸಿಬ್ಬಂದಿ ಕಾರ್ಯನಿರ್ವಹಣೆ, ಚಿಕತ್ಸೆಗೆ ಹಣ ಪಡೆಯುತ್ತಿರುವ ಬಗ್ಗೆ ಪ್ರಶ್ನಿಸಿದರು.
ಈ ವೇಳೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಕುಡಿಯುವ ನೀರಿನ ಸಮಸ್ಯೆಯನ್ನು ಕಂಡ ಶಾಸಕ ರವಿ, ಆಸ್ಪತ್ರೆಗೆ ಸಮರ್ಪಕ ನೀರಿನ ಸೌಲಭ್ಯ ನೀಡುವಂತೆ ನಗರಸಭೆ ಆಯುಕ್ತೆ ತುಷಾರಮಣಿ ಮತ್ತು ಆಸ್ಪತ್ರೆಯಲ್ಲಿ ಶುಚಿತ್ವ ಕಪಾಡುವಂತೆ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪರವರಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಸ್ಯ್ಕಾನಿಂಗ್ ಸೆಂಟರ್ ಇಲ್ಲದಿರುವುದರಿಂದ ಖಾಸಗಿ ಸ್ಯ್ಕಾನಿಂಗ್ ಸೆಂಟರ್ ಗೆ ಬರೆದು ಕಳಿಸಲಾಗುತ್ತಿದೆ. ಇದರಿಂದ 1000 ರೂ..ನಿಂದ 1500 ರೂ. ವೆಚ್ಚ ತಗಲುತ್ತದೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರು ಶಾಸಕ ಸಿ.ಟಿ.ರವಿಯವರಿಗೆ ದೂರು ಹೇಳಿಕೊಂಡರು.
ವೈದ್ಯರು ಯಾವುದೇ ಕಾರಣಕ್ಕೂ ಖಾಸಗಿ ಮೆಡಿಕಲ್ಗಳಿಗೆ ಚೀಟಿ ಬರೆದುಕೊಡದೆ ಜನರಿಕ್ ಶಾಪ್ಗೆ ಚೀಟಿ ಬರೆದುಕೊಂಡುವಂತೆ ಜಿಲ್ಲಾ ಸರ್ಜನ್ ದೊಡ್ಡ ಮಲ್ಲಪ್ಪರವರಿಗೆ ಸೂಚನೆ ನೀಡಿದ ಅವರು, ಮಹಿಳೆಯರು ಮತ್ತು ಮಕ್ಕಳಿಗೆ ನೀಡಲಾಗುವ ಪೌಷ್ಠಿಕ ಆಹಾರಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ತಳ್ಳುಗಾಡಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ: ಜಿಲ್ಲಾ ಹೆರಿಗೆ ಆಸ್ಪತ್ರೆಗೆ ಭೇಟಿನೀಡಿ ಹಿಂತಿರುಗುವಾಗ ಫುಟ್ಬಾತ್ಗಿಂತ ಮುಂದೆ ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವವರನ್ನು ಕಂಡ ಶಾಸಕ ಸಿ.ಟಿ.ರವಿ, ತಳ್ಳುಗಾಡಿಗಳನ್ನು ರಸ್ತೆ ಮಧ್ಯೆ ನಿಲ್ಲಿಸಿಕೊಂಡು ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿಂದೇಯೂ ಕೂಡ ರಸ್ತೆ ಮಧ್ಯೆದವರೆಗೂ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಾರೆ ಎಂಬ ಕಾರಣಕ್ಕೆ ತಳ್ಳುಗಾಡಿಗಳನ್ನು ನಿಲ್ಲಿಸಲು ನಿಷೇಧಿಸಲಾಗಿತ್ತು. ಸಂಚಾರಕ್ಕೆ ತೊಂದರೆಯಾಗದಂತೆ ತಳ್ಳುಗಾಡಿಗಳನ್ನು ನಿಲ್ಲಿಸಿಕೊಳ್ಳುವಂತೆ ವ್ಯಾಪಾರಸ್ಥರಿಗೆ ತಿಳಿಸಿದರು. ಮತ್ತು ತಳ್ಳುಗಾಡಿಗಳಿಂದ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ನಗರಸಭೆ ಆಯುಕ್ತೆ ತುಷಾರ ಮಣಿಗೆ ಸೂಚನೆ ನೀಡಿದರು.