ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಕಾಂಗ್ರೆಸ್ ಅಗತ್ಯ: ಸಚಿವ ಯು.ಟಿ.ಖಾದರ್
ಬೆಂಗಳೂರು, ಆ.12: ಜನಸಾಮಾನ್ಯರ ಸ್ವಾಭಿಮಾನದ ಬದುಕು ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಕಾಂಗ್ರೆಸ್ ಅಗತ್ಯ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಪ್ರತಿಪಾದಿಸಿದರು.
ರವಿವಾರ ರಾಮನಗರ ಜಿಲ್ಲೆಯ ಕನಕಪುರದ ಈದ್ಗಾ ಮೈದಾನದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್, ಅಲ್ಪಸಂಖ್ಯಾತ ಮತದಾರರು ಹಾಗೂ ಸಮುದಾಯದ ಸಚಿವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲ ಜಾತಿ, ಧರ್ಮದ ಜನರ ಪರವಾಗಿ ಶ್ರಮಿಸುವ ಏಕೈಕ ಪಕ್ಷ ಕಾಂಗ್ರೆಸ್. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಬೇಕಿದೆ ಎಂದು ಅವರು ಹೇಳಿದರು.
ಬಿಜೆಪಿಯವರು ನೆಹರು-ಗಾಂಧಿ ಕುಟುಂಬವನ್ನು ಗುರಿಯನ್ನಾಗಿಸಿಕೊಂಡು ನಿರಂತರವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗಾಗಿ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ತಮ್ಮ ರಕ್ತವನ್ನು ಹರಿಸಿದ್ದಾರೆ. ಈ ದೇಶದ ಮಣ್ಣಿನಿಂದ ಅವರ ಅಸ್ತಿತ್ವವನ್ನು ಅಳಿಸಲು ಬಿಜೆಪಿಯವರಿಂದ ಸಾಧ್ಯವಿಲ್ಲ ಎಂದು ಖಾದರ್ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರಕಾರ ದೇಶದ ಜನತೆಗೆ ನೀಡಿರುವ ಯಾವ ಭರವಸೆಯನ್ನಾದರೂ ಈಡೇರಿಸಿದೆಯೇ ? ಸಂಸತ್ತಿನಲ್ಲಿ ರೈತರು, ನಿರುದ್ಯೋಗಿ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಯಾರ ಸಮಸ್ಯೆಗಳ ಬಗ್ಗೆಯಾದರೂ ಚರ್ಚೆ ಮಾಡಿದ್ದಾರೆಯೆ ? ಎಂದು ಅವರು ಪ್ರಶ್ನಿಸಿದರು.
ನಮ್ಮ ಸರಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಶಾಂತಿ ನಮ್ಮ ಕೈಗೆ ನೀಡಿ, ಅಭಿವೃದ್ಧಿ ನಿಮ್ಮ ಕಾಲಿನ ಬುಡಕ್ಕೆ ತರುತ್ತೇವೆ. ಈ ಅಭಿನಂದನಾ ಸಮಾರಂಭವು ನಮ್ಮ ಪಾಲಿಗೆ ಜವಾಬ್ದಾರಿ ಸ್ವೀಕರಿಸುವ ಸಮಾರಂಭವಾಗಿದೆ. ಕನಕಪುರ ತಾಲೂಕಿನ ಜನತೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ನನ್ನ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಮೂಲಕ ರಾಜ್ಯದ ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಎಂಟು ತಿಂಗಳಲ್ಲಿ ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ. ವಸತಿ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಕನಕಪುರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಾತನಾಡಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಶೇ.100ಕ್ಕೆ 100 ರಷ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್ ಅವರಂತಹ ಜಾತ್ಯತೀತ ಮನಸ್ಥಿತಿಯ ನಾಯಕರು ನಮ್ಮೊಂದಿಗೆ ಇರುವವರೆಗೆ ಬಿಜೆಪಿ, ಆರೆಸೆಸ್ಸ್ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
2019ರ ಚುನಾವಣೆಯಲ್ಲಿ ದೇಶದ ಐಕ್ಯತೆ ಹಾಗೂ ಸಮಗ್ರತೆಗಾಗಿ ಒಂದಾಗಿ ಮತ ಚಲಾಯಿಸಿದರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ 20-22 ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ಸಮುದಾಯಕ್ಕೆ ಶಾಸಕರಿಗಿಂತ ಹೆಚ್ಚಾಗಿ ಸಂಸದರ ಅಗತ್ಯವಿದೆ. ಸಂಸತ್ತಿನಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವವರು ಬೇಕು. ಆದುದರಿಂದ, ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಝಮೀರ್ ಅಹ್ಮದ್ ಕರೆ ನೀಡಿದರು.
ಕನಕಪುರ ತಾಲೂಕಿನಲ್ಲಿ ಶಾದಿ ಮಹಲ್ ನಿರ್ಮಾಣ, ಖಬರಸ್ಥಾನ್ಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ಅಲ್ಲದೇ, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ 7 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಝಮೀರ್ ಅಹ್ಮದ್ ಹೇಳಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದವರು ಆರಂಭದಿಂದಲೂ ನಮ್ಮ ಜೊತೆಯಲ್ಲಿ ಇದ್ದಾರೆ, ನಾವು ಅವರ ಜೊತೆ ಸದಾ ಕಾಲ ಇರುತ್ತೇವೆ. ಸರಕಾರದಿಂದ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಜಾರಿಗೊಳಿಸುವ ಯೋಜನೆಗಳು, ಕಾರ್ಯಕ್ರಮಗಳನ್ನು ನಮ್ಮ ಭಾಗದಲ್ಲಿಯೂ ಯಶಸ್ವಿಯಾಗಿ ಅನುಷ್ಠಾನ ಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಸ್ಥಳೀಯ ಮುಖಂಡರಾದ ಸೈಯದ್ ಝಿಯಾವುಲ್ಲಾ, ಇಕ್ಬಾಲ್ ಹುಸೇನ್, ಮದ್ರಸಾ ಎ ಇಮ್ದಾದೀಯಾದ ಮುಖ್ಯಸ್ಥ ಇನಾಯತುಲ್ಲಾ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.