ಸರಕಾರದ ಯೋಜನೆಗಳನ್ನು ಶೋಷಿತ ಸಮುದಾಯ ಸದುಪಯೋಗ ಪಡಿಸಿಕೊಳ್ಳಲಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.26: ಸರಕಾರದ ಯೋಜನೆಗಳನ್ನು ಶೋಷಿತ ಸಮುದಾಯದವರು ಸದುಪಯೋಗ ಪಡಿಸಿಕೊಂಡು, ಸಾಮಾಜಿಕವಾಗಿ ಮುಂದಾಗಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ರವಿವಾರ ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಕರ್ನಾಟಕ ರಾಜ್ಯ ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘ ಆಯೋಜಿಸಿದ್ದ, ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಎಲ್ಲ ಸಮುದಾಯದ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನೋಡಿ, ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ಇದರ ಬಗ್ಗೆ ಮಾಹಿತಿ ಪಡೆದು, ಅಭಿವೃದ್ಧಿ ಆಗಬೇಕು. ಜೊತೆಗೆ, ಇನ್ನಿತರರಿಗೂ ಅರಿವು ಮೂಡಿಸುವಂತೆ ಆಗಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡ ನೆ.ಲ.ನರೇಂದ್ರಬಾಬು ಮಾತನಾಡಿ, ತಿಗಳರ ಸಮುದಾಯ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಸಮುದಾಯದ ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸಬೇಕು. ಸಮುದಾಯದ ಪ್ರತಿಭಾವಂತ ಮಕ್ಕಳು ದೊಡ್ಡ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬೇಕು ಕಿವಿಮಾತು ಹೇಳಿದರು.
ಸಂಘದ ಕಾರ್ಯದರ್ಶಿ ಕೆಂಪಯ್ಯ ಮಾತನಾಡಿ, ಸಮುದಾಯದ ಎಸ್.ಸಿದ್ದಲಿಂಗಯ್ಯ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಬೇಕು. ಅಲ್ಲದೆ, ರಾಜ್ಯದಲ್ಲಿ 25ಲಕ್ಷ ರಷ್ಟು ಜನಸಂಖ್ಯೆ ತಿಗಳರ ಸಮುದಾಯವಿದ್ದು, ಈಗಲೂ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದೆ. ಈ ಜನಾಂಗದ ಯಾರಬ್ಬರೂ, ಉನ್ನತ ಸ್ಥಾನ ತಲುಪಿಲ್ಲ. ಹೀಗಾಗಿ, ಸಂಘವೂ, ಸಮುದಾಯದ ಅಭಿವೃದ್ಧಿ ಗಾಗಿ ದುಡಿಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಉಪಕುಲಪತಿ ಡಾ.ವೇಣುಗೋಪಾಲ್, ಎಸ್.ಎಂ.ಕೃಷ್ಣಪ್ಪ, ಕೆಪಿಟಿಸಿಎಲ್ ಎಚ್.ವಿ.ಮಾಲಿನಿ, ಸಾರಿಗೆ ಆಯುಕ್ತ ವಿರೂಪಾಕ್ಷ ಇಕ್ಕೇರಿ, ನ್ಯಾಯಧೀಶ ಎಚ್.ಆರ್.ರವಿಕುಮಾರ್ , ಶಿಕ್ಷಣ ಇಲಾಖೆ ನಂಜಯ್ಯ ಅವರನ್ನು ಸನ್ಮಾನಿಸಲಾಯಿತು.