ಚಿಕ್ಕಮಗಳೂರು: ನಿವೃತ್ತಿ ಹೊಂದಿದ ಕಾರ್ಯನಿರ್ವಹಣಾಧಿಕಾರಿಗೆ ಬೀಳ್ಕೊಡುಗೆ
ಚಿಕ್ಕಮಗಳೂರು, ಆ.31: ಸರಕಾರಿ ಕೆಲಸದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಜನ ಪ್ರತಿನಿಧಿಗಳ ಮತ್ತು ಜನರ ಪ್ರೀತಿ ವಿಶ್ವಾಸವನ್ನು ಪಡೆಯಬಹುದೆಂದು ತಾಲೂಕು ಪಂಚಾಯತ್ ಅಧ್ಯಕ್ಷ ಜಯ್ಯಣ್ಣ ತಿಳಿಸಿದರು.
ಶುಕ್ರವಾರ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಿವೃತ್ತಿ ಹೊಂದಿದ ಕಾರ್ಯನಿರ್ವಾಹಣ ಅಧಿಕಾರಿ ಸಿದ್ದಪ್ಪ ಅವರಿಗೆ ಬೀಳ್ಕೋಡುಗೆ ನೀಡಿ ಮಾತನಾಡಿ ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳು ಮತ್ತು ಅನುದಾನದ ಬಗ್ಗೆ ಮಾಹಿತಿ ನೀಡಿ ಅಭಿವೃದ್ಧಿ ಕೆಲಸಗಳ ಮೂಲಕ ಎಲ್ಲರ ವಿಶ್ವಾಸ ಪಡೆಯಬೇಕು ಎಂದರು. ಸರ್ಕಾರಿ ಕೆಲಸದಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಎಲ್ಲರಿಗೂ ಇರುತ್ತದೆ. ನಿವೃತ್ತಿ ಆದ ನಂತರವೂ ಕ್ರಿಯಾಶೀಲವಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದರು.
ನಿವೃತ್ತಿಗೊಂಡ ಕಾರ್ಯ ನಿರ್ವಹಣಾಧಿಕಾರಿ ಸಿದ್ದಪ್ಪ ಮಾತನಾಡಿ, ತಾಲೂಕಿನಲ್ಲಿ ಕೆಲಸ ಮಾಡಿದ ತೃಪ್ತಿ ನನಗಿದೆ. ಎಲ್ಲಾ ಸದಸ್ಯರ ಮತ್ತು ಅಧ್ಯಕ್ಷರುಗಳ ಸಲಹೆ ಮತ್ತು ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಲು ಸಾದ್ಯವಾಯಿತು. ಜನಪ್ರತಿನಿಧಿಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭ ತಾಪಂ ಉಪಾಧ್ಯಕ್ಷ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯ ನಟೇಶ್, ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಉಪಾಧ್ಯಕ್ಷ ವೈ.ಜಿ.ಸುರೇಶ್, ಸದಸ್ಯರಾದ ಡಿ.ಜೆ.ಸುರೇಶ್, ಮಲ್ಲಿಕಾರ್ಜುನ್, ಮಹೇಶ್, ಸಿದ್ದಾಪುರ ರಮೇಶ್, ರೇಖಾಅನಿಲ್, ದ್ರಾಕ್ಷಾಯಿಣಿ ಪೂರ್ಣೇಶ್, ದೀಪನಾಗೇಶ್ ಉಪಸ್ಥಿತರಿದ್ದರು.