ಮಂಡ್ಯ: ಭೀಕರ ರಸ್ತೆ ಅಪಘಾತಕ್ಕೆ ಮಹಿಳೆ ಬಲಿ; ನಾಲ್ವರು ಗಂಭೀರ
ಮಂಡ್ಯ, ಸೆ.16: ರಸ್ತೆ ವಿಭಜಕಕ್ಕೆ ಢಿಕ್ಕಿಯೊಡೆದು ಪಕ್ಕದ ರಸ್ತೆಗೆ ಬಿದ್ದ ಕಾರಿಗೆ ಸಾರಿಗೆ ಬಸ್ ಢಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಒಂದೇ ಕುಟುಂಬದ ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಬೆಂಗಳೂರು ಮೈಸೂರು ಹೆದ್ದಾರಿಯ ರುದ್ರಾಕ್ಷಿಪುರ ಗೇಟ್ ಬಳಿ ರವಿವಾರ ಸಂಜೆ ನಡೆದಿದೆ.
ಬಿಡದಿ ಬಳಿಯ ಇಟ್ಟಮಡು ಗ್ರಾಮದ ನಿವಾಸಿ ಸುಕನ್ಯ(40) ಸಾವನ್ನಪ್ಪಿದ ಮಹಿಳೆಯಾಗಿದ್ದು, ಅವರ ಕುಟುಂಬದ ಕಮಲಮ್ಮ, ಹೇಮಂತ್ ಕುಮಾರ್, ವಾಸುದೇವ ಹಾಗೂ ಬೋರಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ.
ಸುಕನ್ಯ ಕುಟುಂಬದವರು ಮದುವೆ ಸಂಬಂಧ ಮದ್ದೂರಿಗೆ ಬಂದು ಮತ್ತೆ ತಮ್ಮಗ್ರಾಮಕ್ಕೆ ಕಾರಿನಲ್ಲಿ ವಾಪಸ್ ಹೋಗುತ್ತಿದ್ದಾಗ ಮದ್ದೂರು ಹೊರವಲಯದ ರುದ್ರಾಕ್ಷಿಪುರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.
ಮುಂದೆ ಸಾಗುತ್ತಿದ್ದ ಐರಾವತ ಬಸ್ನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ಉರುಳಿದಾಗ ಎದುರಿನಿಂದ ಬಂದ ಸಾರಿಗೆ ಬಸ್ ಢಿಕ್ಕಿಯಾಯಿತು ಎಂದು ಹೇಳಲಾಗಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಮತ್ತು ಪೊಲೀಸರು ಗಾಯಗೊಂಡವರನ್ನು ಮದ್ದೂರಿನ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮವಹಿಸಿದ್ದಾರೆ.