ಲಂಚ ಪಡೆದ ಆರೋಪ: ಭೂ ವಿಜ್ಞಾನಿ ದೋಷಮುಕ್ತ
ಮೈಸೂರು,ಸೆ.19: ಮರಳು ಸಾಗಾಣಿಕೆಗೆ ಅನುಮತಿ ನೀಡಲು ಒಂದು ಲಕ್ಷ ರೂ. ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಭೂ ವಿಜ್ಞಾನಿ ಅಲ್ಫೋನ್ಸಿಸ್ ಅವರನ್ನು ಮೂರನೇ ಹೆಚ್ಚುವರಿ ನ್ಯಾಯಾಲಯ ಖುಲಾಸೆಗೊಳಿಸಿದ್ದು, ನ್ಯಾಯಾಧೀಶ ಸುಧೀಂದ್ರನಾಥ್ ಆರೋಪಿಯನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
2010ರ ಮಾರ್ಚ್ 27ರಂದು ಕುವೆಂಪುನಗರದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಅಲ್ಫೋನ್ಸಿಸ್ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಕ್ರಮ ಗಣಿಗಾರಿಕೆ ಸಂಬಂಧ ಒಂದು ಲಕ್ಷ ಲಂಚ ಪಡೆಯುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದರು. ಲೋಕಾಯುಕ್ತರಲ್ಲಿ ಬಸವರಾಜು ಎಂಬವರು ತಾನು ನಾದಕೃಷ್ಣ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ಪರವಾಗಿ ಹಣ ನೀಡುತ್ತಿದ್ದೆ ಎಂದು ದೂರು ನೀಡಿದ್ದರು. ಆದರೆ ವಿಚಾರಣೆಯ ವೇಳೆ ನಾದಕೃಷ್ಣ ಅವರು ಬಸವರಾಜು ಅವರಿಗೆ ಹಣ ನೀಡಿರಲಿಲ್ಲ. ಅವರು ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂಬ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಅಲ್ಫೋನ್ಸಿಸ್ ದೋಷಮುಕ್ತಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.