ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಸ್ವಾಮೀಜಿಯ ಶಿಷ್ಯನ ಬಂಧನ
ಮೈಸೂರು,ಸೆ.21: ಚಾತುರ್ಮಾಸದ ಪೂಜೆಯ ವೇಳೆ ಸ್ವಾಮೀಜಿಯೋರ್ವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆಯೋರ್ವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾಹಂಸ ಭಾರತೀ ಸ್ವಾಮೀಜಿ ಶಿಷ್ಯನನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಅನಿಲ್ ಆಚಾರ್ಯ ಎಂದು ಗುರುತಿಸಲಾಗಿದೆ. ರಾಮಕೃಷ್ಣ ನಗರದಲ್ಲಿರುವ ಮನೆಗೆ ಮಧ್ಯರಾತ್ರಿ ಬಂದು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪತ್ರಕರ್ತ ರಾಜೇಶ್ ಬೋರೆಯ ಪತ್ನಿ ಆರೋಪಿಸಿದ್ದರು. ಲೈಂಗಿಕ ಕಿರುಕುಳಕ್ಕೆ ಪತಿ ಸಹಕಾರ ನೀಡಿದ್ದು, ಸ್ವಾಮೀಜಿ ಹಾಗೂ ಇತರ ಐದು ಮಂದಿ ಕಿರುಕುಳ ನೀಡಿದ್ದರೆಂದು ಗೃಹಿಣಿ ಆರೋಪಿಸಿದ್ದರು.
ಸೆಪ್ಟೆಂಬರ್ 4 ರಂದು ಘಟನೆ ನಡೆದಿತ್ತು. ಸೆಪ್ಟೆಂಬರ್ 7 ರಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನದಿಂದ ಸ್ವಾಮೀಜಿ ಹಾಗೂ ರಾಜೇಶ್ ಬೋರೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಘಟನೆ ನಡೆದ ವೇಳೆ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಕೂಡ ಇದ್ದರು. ಸಂತ್ರಸ್ತೆ ಅನಿಲ್ ಆಚಾರ್ಯರನ್ನು ಗುರುತಿಸಿದ್ದಾರೆ ಎನ್ನಲಾಗಿದೆ. ಇನ್ನುಳಿದವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.