ಸಾಲಬಾಧೆಯಿಂದ ಆತ್ಮಹತ್ಯೆ: ನಂದೀಶ್ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ
ಮಂಡ್ಯ, ಸೆ.23: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನಂದೀಶ್ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿದರು.
ನಂದೀಶ್ ತಂದೆ ಕೆಂಪೇಗೌಡ, ತಾಯಿ ಕಮಲಮ್ಮ ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ ಸಿದ್ದರಾಮಯ್ಯ, ವೈಯುಕ್ತಿಕವಾಗಿ 1 ಲಕ್ಷ ರೂ. ಪರಿಹಾರ ನೀಡಿದರು.
ನಂದೀಶ್ ತಂದೆ ಕೆಂಪೇಗೌಡ ಅವರ ಮೊಮ್ಮಗಳು ಕೀರ್ತನಾ ಅವರಿಗೆ ಪದವಿ ಮುಗಿದ ನಂತರ ಕೆಲಸ ಕೊಡಿಸುವ ಭರವಸೆ ಕೊಟ್ಟರು.
ಮನೆಗೆ ಬಂದ ಸಿದ್ದರಾಮಯ್ಯ ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಕುಳಿತು ಕುಟುಂಬಸ್ಥರ ಸಮಸ್ಯೆ ಆಲಿಸಿದರು. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಿಸುವುದಾಗಿ ಸರಕಾರಕ್ಕೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಆತ್ಮಹತ್ಯೆ ಮಾಡಿಕೊಂಡು ರೈತರ ಹೆಸರಲ್ಲಿ ಜಮೀನಿದ್ದು ಬ್ಯಾಂಕ್ಗಳಲ್ಲಿ ಸಾಲ ಇದ್ದರೆ ಆ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ಪರಿಹಾರ, ಆ ಕುಟುಂಬ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಆರೋಗ್ಯ ಸೌಲಭ್ಯ, ಪಿಂಚಣಿ ಸೌಲಭ್ಯ ಸಿಗಲಿದೆ ಎಂದರು.
ರಾಜ್ಯ ಸಮಿಶ್ರ ಸರಕಾರ ಸುಭದ್ರವಾಗಿದೆ, ಸರಕಾರ ಬಿದ್ದೋಗುತ್ತದೆ ಎಂಬುದಾಗಿ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಅದು ನನಸಾಗುವುದಿಲ್ಲ. ನಮ್ಮ ಶಾಸಕರು ಎಲ್ಲಿಗೂ ಹೋಗಿಲ್ಲ, ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಲ್ಲರೂ ನಮ್ಮೊಂದಿಗೆಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್ಬಂಡಿಸಿದ್ದೇಗೌಡ, ಸೋಮಶೇಖರ್, ನರೇಂದ್ರಸ್ವಾಮಿ, ಮುಖಂಡರಾದ ಶಿವಣ್ಣ, ಗಣಿಗರವಿಕುಮಾರ್, ಸಚ್ಚಿದಾನಂದ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.