ತಂದೆಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಮಗ ಆತ್ಮಹತ್ಯೆ: ಪುತ್ರನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ಅಪ್ಪ
ಮಂಡ್ಯ, ಸೆ.27: ತಂದೆಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಮಗ ಆತ್ಮಹತ್ಯೆ ಮಾಡಿಕೊಂಡರೆ, ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ.
ತಂದೆ ಈರಣ್ಣಶೆಟ್ಟಿ(50) ಹಾಗೂ ಮಗ ಮಂಜು(25) ಸಾವನ್ನಪ್ಪಿದವರು.
ಅನಾರೋಗ್ಯದಿಂದ ಬಳಲುತ್ತಿದ್ದ ಈರಣ್ಣಶೆಟ್ಟಿ ಅವರನ್ನು ಮೈಸೂರಿನ ಬಾನವಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಂದೆಯ ವೈದ್ಯಕೀಯ ವೆಚ್ಚ 2 ಲಕ್ಷ ರೂ. ಭರಿಸಲು ಪುತ್ರ ಮಂಜುಗೆ ಕಷ್ಟವಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಾರು ಚಾಲಕನಾಗಿರುವ ಮಂಜು ಮೈಸೂರಿನ ತನ್ನ ರೂಂ ಕೊಠಡಿಯಲ್ಲಿ ಬುಧವಾರ ತಡರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನೆನ್ನಲಾಗಿದ್ದು, ಸುದ್ದಿ ತಿಳಿದ ತಂದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಗ್ರಾಮಸ್ಥರು ಶವಗಳನ್ನು ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಿದ್ದು, ಈ ಸಂಬಂಧ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story