ಶಿವಮೊಗ್ಗ: ಕಲ್ಲುಕೋರೆ ಕಾರ್ಮಿಕರ ನಡುವೆ ಮಾರಾಮರಿ; ಓರ್ವನಿಗೆ ಚೂರಿ ಇರಿತ
ಮೂವರಿಗೆ ಗಾಯ
ಶಿವಮೊಗ್ಗ, ಅ. 1: ನಗರದ ಹೊರವಲಯ ಸಂತೆಕಡೂರು ಸಮೀಪದ ಶ್ರೀರಾಮನಗರದಲ್ಲಿ, ಅಕ್ಕಪಕ್ಕದ ಕಲ್ಲುಕೋರೆ ಕಾರ್ಮಿಕರ ನಡುವೆ ಸೋಮವಾರ ನಡೆದ ಮಾರಾಮಾರಿಯಲ್ಲಿ ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. ಗಲಾಟೆಯಲ್ಲಿ ಮೂವರಿಗೆ ಗಾಯವಾಗಿದೆ. ಗಾಯಾಳುಗಳೆಲ್ಲರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತೀಶ್ ಚೂರಿ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಇವರ ಬೆನ್ನಿಗೆ ಚೂರಿಯಿಂದ ಇರಿಯಲಾಗಿದ್ದು, ದೊರೆಸ್ವಾಮಿ, ಚಾಮರಾಜ ಎಂಬುವರಿಗೆ ರಾಡ್ನಿಂದ ಹಲ್ಲೆ ನಡೆಸಲಾಗಿದೆ. ಈ ಕುರಿತಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು - ಪ್ರತಿದೂರುಗಳು ದಾಖಲಾಗಿವೆ.
ಘಟನೆ ಹಿನ್ನೆಲೆ: ಕಲ್ಲುಕೋರೆಗಳಲ್ಲಿ ಸ್ಪೋಟ ನಡೆಸುವುದರ ಮೇಲೆ ಜಿಲ್ಲಾಡಳಿತ ಇತ್ತೀಚೆಗೆ ನಿರ್ಬಂಧ ಹೇರಿದೆ. ಶ್ರೀರಾಮನಗರದ ಬಳಿಯಿರುವ ಕಲ್ಲುಕೋರೆಗಳಲ್ಲಿ ಸ್ಫೋಟ ನಡೆಸುವ ಕುರಿತಂತೆ ಎರಡು ಕೋರೆ ಕಾರ್ಮಿಕರ ನಡುವೆ ಏರ್ಪಟ್ಟ ವಿವಾದ, ಮಾರಾಮರಿಯಲ್ಲಿ ಅಂತ್ಯಗೊಂಡಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Next Story