ಹನೂರು: ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ
ಹನೂರು,ಅ.9: ರಾಜ್ಯ ಮತ್ತು ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವಂತೆ ದೊಡ್ಡಿಂದುವಾಡಿ ಗ್ರಾಪಂ ಪಿಡಿಒ ದಯಾನಂದ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ದೂಡ್ಡಿಂದುವಾಡಿ ಗ್ರಾಮದಲ್ಲಿ ಆಯೋಜಿಸಿದ್ದ 2018-19ಸಾಲಿನ ಮೊದಲ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಅಭಿವೃದ್ದಿಗೆ ಪೂರಕವಾದ ಮಹತ್ತರ ಯೋಜನೆ ಇದಾಗಿದೆ. ಇದರಲ್ಲಿ ಗ್ರಾಮದ ಜನರು ಕೊಟ್ಟಿಗೆ, ಮನೆ, ಜಮೀನು ಸಮತಟ್ಟು, ಕೃಷಿಹೊಂಡ, ಒಕ್ಕಣೆಕಣ, ಸಿಸಿರಸ್ತೆ, ಚರಂಡಿ, ಸಾರ್ವಜನಿಕರ ಜಮೀನು ರಸ್ತೆ, ಕೆರೆಕಟ್ಟೆ ಹೂಳು ತೆಗೆಯುವುದು, ಸಸಿ ನೆಡುವುದು, ಶೌಚಾಲಯ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಕಾಮಗಾರಿಗಳನ್ನು ನಿರ್ವಹಿಸಬಹುದು. ಆಸಕ್ತಿಯುಳ್ಳವರು ಅರ್ಜಿ ನೀಡಿದರೆ ಕ್ರಿಯಾ ಯೋಜನೆಗೆ ಸೇರಿಸಿ ಅನುಮೋದನೆ ಪಡೆಯಲಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗ್ರಾಮೀಣ ಭಾಗದ ಪ್ರಗತಿಗೆ ಗ್ರಾಮಸ್ಥರು ಕೈಜೋಡಿಸಬೇಕು ಎಂದು ಮನವಿ ಮಾಡಿದರು
ನಂತರ ಮಾತನಾಡಿದ ತಾಲೂಕು ಲೆಕ್ಕ ಸಂಯೋಜಕ ಮನೋಹರ್, ಈ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಾಮೂಹಿಕ ಕಾಮಗಾರಿಗಳನ್ನು ಮಾಡಲು ಗ್ರಾಮಸ್ಥರಿಗೆ ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಲೊಕೇಶ್, ನೋಡಲ್ ಅಧಿಕಾರಿ ಶಾಂತರಾಜ್, ಲೆಕ್ಕ ಸಂಯೋಜಕ ಮನೋಹರ್, ಕಾರ್ಯದರ್ಶಿ ಪವಿತ್ರ, ಹಾಗೂ ಗ್ರಾಪಂ ಸದಸ್ಯರು ಕಚೇರಿ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.