ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಸಂಸದೆ ಶೋಭಾ ವಿಶ್ವಾಸ
ಚಿಕ್ಕಮಗಳೂರು, ಅ.11: ಲೋಕಸಭೆ ಉಪಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದು, ಉಪಚುನಾವಣೆ ಗೆಲುವು ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ಚುನಾವಣಾ ಗೆಲುವಿಗಾಗಿ ಎಲ್ಲರೂ ಶಕ್ತಿ ಮೀರಿ ಕೆಲಸಮಾಡಲಿದ್ದು, ಗೆಲುವು ನಮ್ಮದೇ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿರೀಕ್ಷಿತವಾಗಿ ಚುನಾವಣೆ ಬಂದಿದೆ. ಗೆದ್ದ ಅಭ್ಯರ್ಥಿಗಳಿಗೆ ಆರು ತಿಂಗಳ ಅವಧಿಯೂ ಸಿಗುವುದಿಲ್ಲ. ಉಪಚುನಾವಣೆ ನಡೆಯುವುದಿಲ್ಲ ಎಂದು ಎಲ್ಲಾ ರಾಜಕೀಯ ಪಕ್ಷಗಳು ಅಂದುಕೊಂಡಿದ್ದವು. ಚುನಾವಣೆ ಘೋಷಣೆ ಎಲ್ಲ ಪಕ್ಷಗಳಿಗೂ ಅಚ್ಚರಿ ಮೂಡಿಸಿದೆ. ಆದರೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಬಹುತೇಕ ಮುಗಿಸಿದೆ ಎಂದು ತಿಳಿಸಿದರು.
ಆರು ತಿಂಗಳಲ್ಲಿ ದೇಶದ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಉಪಚುನಾವಣೆ ಗೆಲುವು ಬಿಜೆಪಿ ಪಕ್ಷಕ್ಕೆ ಇನಷ್ಟು ಶಕ್ತಿ ನೀಡಲಿದೆ. ಶಿವಮೊಗ್ಗ, ಬಳ್ಳಾರಿಯಲ್ಲಿ ಬಿಜೆಪಿಯೇ ಗೆದ್ದಿರುವುದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ರಾಮನಗರದಲ್ಲಿ ಸಹಜವಾಗಿ ಸಂಘಟನಾ ಶಕ್ತಿ ಕಡಿಮೆ ಇದೆ. ಜಮಖಂಡಿಯಲ್ಲಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದೆವು. ಅಲ್ಲಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಗೊಳಿಸುವ ಕೆಲಸ ಮಾಡಲಾಗಿದ್ದು, ಅಲ್ಲಿಯೂ ಬಿಜೆಪಿ ಅಭರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.
ಉಪ ಚುನಾವಣೆ ಕರ್ನಾಟಕದಲ್ಲಿ ಬಿಜೆಪಿಗೆ ಜನ ಬೆಂಬಲವಿದೆ ಎಂಬುದನ್ನು ಸಾಭೀತು ಮಾಡಲಿದೆ. ನಾಲ್ಕುವರೆ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಹಲವಾರು ಅಭಿವೃದ್ಧಿ ಕೆಲಸಗಳು, ಇಡೀ ಪ್ರಪಂಚದಲ್ಲಿ ಭಾರತಕ್ಕೆ ಸಿಕ್ಕ ಗೌರವ, ಸೈನ್ಯವನ್ನು ಬಲಗೊಳಿಸಿದ್ದು, ಗಡಿ ಭದ್ರತೆ, ಯುಪಿಎ ಸರಕಾರದ ಹಗರಣಗಳಿಂದ ದೇಶವನ್ನು ಪಾರು ಮಾಡಿರುವ ಪ್ರಧಾನಿ ಮೋದಿ ದೇಶದ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತಂದಿರುವುದು ಮತ್ತು ಆರ್ಥಿಕ ಪ್ರಗತಿಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಆರನೇ ಸ್ಥಾನಕ್ಕೆ ಬಂದಿರುವುದು ದೇಶಕ್ಕೆ ಸಂದ ಗೌರವವಾಗಿದೆ. ಈ ಕಾರಣಗಳಿಂದಾಗಿ ಮೋದಿ ಅವರನ್ನು ಮತ್ತೊಮ್ಮೆ ದೇಶದ ಜನತೆ ಪ್ರಧಾನಿಯಾಗುವುದನ್ನು ಭಯಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ನಡೆಯುತ್ತಿರುವ ಛತ್ತೀಸ್ಘಡ, ರಾಜಸ್ಥಾನ, ಮಧ್ಯಪ್ರದೇಶದ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ಕರ್ನಾಟಕದ ಲೋಕಸಭೆ ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಸಹಜವಾಗಿ ಪಕ್ಷ ಸಂಘಟನಾತ್ಮಕವಾಗಿ ಹಿಂದಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಒಳಜಗಳ ಬಿಜೆಪಿಗೆ ಶಕ್ತಿ ತುಂಬಲಿದೆ. ಅಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ರಾಮನಗರ ಹಾಲಿ ಎಂಎಲ್ಸಿ ಲಿಂಗಪ್ಪ ಅವರ ಮಗ ಬಿಜೆಪಿ ಸೇರಿದ್ದಾರೆ. ಹಾಗೆಯೇ ಬೇರೆ ಬೇರೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರುತ್ತಿದ್ದು, ಮೋದಿ ಮತ್ತು ಯಡಿಯೂರಪ್ಪ ಅವರ ನಾಯಕತ್ವವನ್ನು ಅಲ್ಲಿನ ಜನತೆ ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.