ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕ್ರಮ: ದಾವಣಗೆರೆ ಎಸ್ಪಿ
ದಾವಣಗೆರೆ,ಅ.12: ಇತ್ತೀಚೆಗೆ ನಗರದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದು, ಎಫ್ಎಸ್ಎಲ್, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಆರ್.ಚೇತನ್ ತಿಳಿಸಿದರು.
ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕರೂರು ರಸ್ತೆಯ ನಿರ್ಜನ ಪ್ರದೇಶದ ತೋಟವೊಂದರ ಬಳಿ ಯುವತಿ ಶವ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಕುಟುಂಬ ವರ್ಗವು ರಂಜಿತಾ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದ ಅವರು, ಮೃತ ಯುವತಿಯ ಶವದ ಮರಣೋತ್ತರ ಪರೀಕ್ಷೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ. ನಗರ ಡಿಎಸ್ಪಿ, ವೃತ್ತ ನಿರೀಕ್ಷಕ ಹಾಗೂ ಮಹಿಳಾ ಠಾಣೆ ಸಬ್ ಇನ್ಸಪೆಕ್ಟರ್ ನೇತೃತ್ವದ ತಂಡವು ಆರೋಪಿಗಳಿಗಾಗಿ ಶೋಧ ನಡೆಸಿದೆ ಎಂದರು.
ಅನುಮಾನಾಸ್ಪದವಾಗಿ ಇದ್ದಂತಹವರನ್ನು ಪೊಲೀಸ್ ಇಲಾಖೆ ವಿಚಾರಣೆ ನಡೆಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಹ ಸ್ಥಳಕ್ಕೆ ಧಾವಿಸಿ, ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಇನ್ನು 2-3 ದಿನದಲ್ಲೇ ಪ್ರಯೋಗಾಲಯದ ವರದಿ ಸಹ ಬರಲಿದೆ. ರಂಜಿತಾ ಕೇಸ್ನಲ್ಲಿ ಒಬ್ಬರ ಪಾತ್ರವಿದೆಯೋ ಅಥವಾ ಇಬ್ಬರು ಇದ್ದಾರೋ ಎಂಬುದೂ ವರದಿಯಿಂದಲೇ ಸ್ಪಷ್ಟವಾಗಲಿದೆ ಎಂದರು.