ಕುಡಿಯಲು ಹಣ ನೀಡದ ತಂದೆಯನ್ನು ಕೊಂದ ಮಗ
ಚಾಮರಾಜನಗರ,ಅ.27: ಮದ್ಯವ್ಯಸನಿಯೋರ್ವ ಕುಡಿಯಲು ಹಣ ನೀಡಲಿಲ್ಲವೆಂದು ತಂದೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ತಮ್ಮಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ತಮ್ಮಡಹಳ್ಳಿ ಗ್ರಾಮದ ನಾಯಕ ಬೀದಿಯ ನಿವಾಸಿ ಎಳನೀರು ವ್ಯಾಪಾರಿ ಮಹದೇವನಾಯಕ (65) ಎಂಬವವರೇ ಮಗನಿಂದ ಸಾವಿಗೀಡಾದ ವ್ಯಕ್ತಿ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮಡಹಳ್ಳಿ ಗ್ರಾಮದ ಮಹದೇವನಾಯಕರನ್ನು ಅವರ ಮಗ ಸ್ವಾಮಿ ಪ್ರತಿ ನಿತ್ಯ ಕುಡಿಯಲು ಹಣ ಕೇಳುತ್ತಿದ್ದ ಎನ್ನಲಾಗಿದ್ದು, ಅದೇ ರೀತಿ ಶುಕ್ರವಾರ ರಾತ್ರಿ ಕುಡಿಯಲು ಹಣ ನೀಡಲಿಲ್ಲವೆಂದು ಮಗ ಸ್ವಾಮಿ ತಂದೆಯೊಂದಿಗೆ ಜಗಳಮಾಡಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಲ್ಲಿನಿಂದ ಮಹದೇವನಾಯಕ ಅವರಿಗೆ ಹೊಡೆದ ಪರಿಣಾಮ ತಲೆಯ ಎಡ ಭಾಗಕ್ಕೆ ಪೆಟ್ಟು ಬಿದ್ದ ಪರಿಣಾಮ ಮಹದೇವನಾಯಕ ಅವರಿಗೆ ತೀವ್ರ ರಕ್ತಸಾವ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎನ್ನಲಾಗಿದೆ.
ಘಟನೆಯ ಬಗ್ಗೆ ಸ್ವಾಮಿ ಪತ್ನಿ ಮಮತಾ ಪೊಲೀಸರಿಗೆ ಹೇಳಿಕೆ ನೀಡಿದ್ದು, ಮದುವೆಯಾದ ದಿನದಿಂದ ಇಂದಿನ ತನಕ ಕುಡಿದು ಮನೆಯಲ್ಲಿ ಗಲಾಟೆ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ, ಕುಡಿದ ಅಮಲಿನಲ್ಲಿ ತನ್ನ ಪತಿ ಶುಕ್ರವಾರ ತಮ್ಮ ತಂದೆಯನ್ನೇ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಕೊಲೆ ನಾನು ಮಾಡಿಲ್ಲ, ಮನೆಯಲ್ಲಿ ಗಲಾಟೆಯಾಗಿತ್ತು, ನನಗೂ ಗಾಯವಾಗಿದೆ ಅದೇ ರೀತಿಯಾಗಿ ನನ್ನ ತಂದೆಗೂ ಗಾಯವಾಗಿದೆ ಇದರಲ್ಲಿ ನನ್ನ ತಪ್ಪಿಲ್ಲ ಎಂದು ಆರೋಪಿ ಸ್ವಾಮಿ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಪ್ರತಿನಿತ್ಯ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು, ಶುಕ್ರವಾರ ರಾತ್ರಿ ಗಲಾಟೆ ಮಿತಿ ಮೀರಿದ ಪರಿಣಾಮ ನನ್ನ ತಂದೆಯನ್ನು ನನ್ನ ಸಹೋದರ ಸ್ವಾಮಿ ಕಲ್ಲು ಹೊಡೆದು ಸಾಯಿಸಿದ್ದಾನೆ ಅವನಿಗೆ ಶಿಕ್ಷೆ ಆಗಬೇಕು ಎಂದು ಮೃತರ ಪುತ್ರಿ ಪುಷ್ಪ ತಿಳಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ತಮ್ಮ ತಂದೆಯನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ ಅಂತ ಸುದ್ದಿ ತಿಳಿಯಿತು ಬೆಳಗ್ಗೆ ಊರಿಗೆ ಬಂದೆ ಅಪ್ಪ ಮೃತರಾಗಿದ್ದರು ಎಂದು ಮೃತರ ಇರ್ನ್ನೋವ ಮಗಳು ಮಂಗಳಾ ತಿಳಿಸಿದ್ದಾರೆ.
ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಾಗಿಸಿದಾಗ ಕುಟುಂಬದವರ ಮೇಲೆಯೇ ಹಲ್ಲೆಗೆ ಆರೋಪಿ ಸ್ವಾಮಿ ಮುಂದಾದಾಗ ಈತನ ವರ್ತನೆಯಿಂದ ನೆರೆದಿದ್ದ ಸಾರ್ವಜನಿಕರು ಧರ್ಮದೇಟು ಹಾಕಿದ ಘಟನೆ ನಡೆಯಿತು.
ತಂದೆಯ ಸಾವಿಗೆ ಕಾರಣನಾದ ಆರೋಪಿ ಸ್ವಾಮಿಯನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.