ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆ ಜವಾಬ್ದಾರಿಯುತವಾದುದು: ಕವಿ ಡಾ.ಸಿದ್ದಲಿಂಗಯ್ಯ
ಬೆಂಗಳೂರು, ನ.3: ಸಾರ್ವಜನಿಕ ಸಂಪರ್ಕ ಅಧಿಕಾರಿ ಜವಾಬ್ದಾರಿಯುತವಾದ ಹುದ್ದೆಯಾಗಿದೆ. ಸಂಸ್ಥೆಗಳಲ್ಲಿ ಜನರಿಗೆ ಅಧಿಕಾರಿಗಳಿಲ್ಲ ಎಂಬುದನ್ನು ಉತ್ತರವಿಲ್ಲದ ರೀತಿಯಲ್ಲಿ ಹೇಳುವ ಬದಲಿಗೆ, ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು.
ನಯನ ಸಭಾಂಗಣದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಹಾಮಂಡಳಿ (ಪಿಆರ್ಸಿಐ) ಮತ್ತು ಯುವ ಸಂವಹನಕಾರರ ಮಂಡಳಿ (ವೈಸಿಸಿ) ಆಯೋಜಿಸಿದ್ದ ವಿಶ್ವ ಸಂವಹನಕಾರರ ದಿನಾಚರಣೆ-2018 ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಲವು ಸಂಸ್ಥೆಗಳಲ್ಲಿ ಸಂವಹನದ ಕೊರತೆ ಹೆಚ್ಚಿದೆ. ಅವಿದ್ಯಾವಂತರು ಸಂಸ್ಥೆಗಳಿಗೆ ಭೇಟಿ ಕೊಟ್ಟಾಗ ಯಾರನ್ನು ಸಂಪರ್ಕಿಸಿದರೆ ಮಾಹಿತಿ ಸಿಗುತ್ತದೆ ಎಂಬ ಅರಿವು ಇರುವುದಿಲ್ಲ. ಹೀಗಾಗಿ, ಸಂವಹನದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಅಂತಹವರಿಗೆ ಸಹಾಯ ಮಾಡಬೇಕು ಎಂದು ಅವರು ನುಡಿದರು.
ಸಾಮಾಜಿಕ ವಿಚಾರಗಳ ಬಗ್ಗೆ ಗಮನ ಹರಿಸಬೇಕಾದ ಸಾಮಾಜಿಕ ಕೋಶಗಳನ್ನು ಸಾರ್ವಜನಿಕ ಸಂಪರ್ಕ ಸಂಸ್ಥೆ ಹೊಂದಿರುತ್ತದೆ. ಕಾರ್ಯನಿರ್ವಹಣೆಯ ಬಗ್ಗೆ ಜನರಿಗೆ ತಿಳಿಸುವಲ್ಲಿ ಸಂಸ್ಥೆಯ ಪ್ರಮುಖ ಪಾತ್ರ ವಹಿಸಬೇಕು ಎಂದು ಸಿದ್ದಲಿಂಗಯ್ಯ ಸಲಹೆ ನೀಡಿದರು.
ಡಾಕ್ಟರೇಟ್ ಮಾಡುವಾಗ ಸಂವಹನದ ಬಗ್ಗೆ ತಿಳಿದುಕೊಂಡಿದ್ದೆ. ಒಂದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರ ಸಂವಹನ ವಿಶೇಷ, ವಿಶಿಷ್ಟವಾಗಿತ್ತು. ಜನರ ಧಾರ್ಮಿಕ ನಂಬಿಕೆಗಳು ಹಾಗೂ ಅದರೊಂದಿಗಿನ ಸಂವಹನ ವಿಚಿತ್ರವಾದರೂ ವಿಭಿನ್ನವಾಗಿತ್ತು ಎಂದ ಅವರು, ಜಾತಿ ಪದ್ಧತಿಗೂ ಸಂವಹನ ಅಡ್ಡಿಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಕೆಳ ಜಾತಿ-ಮೇಲ್ಜಾತಿ ಎಂಬುದನ್ನು ಹೇಳಿಕೊಡುವ ಸ್ಥಿತಿ ಇದೆ. ನಮ್ಮ ಈ ಸಮಾಜದಲ್ಲಿ ಮೊದಲು ಜಾತಿ ನಿರ್ಮೂಲನೆಯಾಗಬೇಕು ಎಂದು ಹೇಳಿದರು.
ವಿದೇಶಗಳಲ್ಲಿ ಭಾಷೆಯ ಸಂವಹನ ಅತ್ಯಂತ ಪ್ರಮುಖವಾಗಿ ಬೇಕಾಗಿದೆ. ಒಂದು ಬಾರಿ ಬ್ಯಾಂಕಾಕ್ಗೆ ಭೇಟಿ ನೀಡಿದ್ದೆ. ಆ ವೇಳೆ ಹೊಟೇಲ್ನಲ್ಲಿ ಚಿಕನ್ ತಿನ್ನಲು ಹೋದಾಗ ಅವರಿಗೆ ನಾನು ಹೇಳಿದ ಆರ್ಡರ್ ಅರ್ಥವಾಗಲಿಲ್ಲ. ಚಿತ್ರ ಬರೆಯಲು ತಿಳಿಸಿದರು. ಆದರೆ, ಅಲ್ಲಿ ಚೇಳು ಮತ್ತು ಕಪ್ಪೆಗಳ ಚಿತ್ರಗಳಿದ್ದವು. ಕೊನೆಗೆ ಗೊಂದಲಗೊಂಡು ಕೋಳಿಯಂತೆ ಕೂಗಿದ್ದೆ. ಅದನ್ನು ನೋಡಿ ಅರ್ಥ ಮಾಡಿಕೊಂಡಿದ್ದರು ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತ ರಾಜೇಶ್ ರೈ ಚಟ್ಲ, ಪರಿಸರ ತಜ್ಞ ಡಾ.ಟಿ.ವಿ.ರಾಮಚಂದ್ರ, ಸಂಗೀತದ ತಾಳವಾದ್ಯಗಾರ ಕೆ.ಎಂ.ಗೋಪಿನಾಥ್, ರೇಡಿಯೋ ಜಾಕಿ ಸಂದೀಪ್ ರಾಂ, ಶಿಕ್ಷಣ ತಜ್ಞ ಕೆ.ಬಿ.ರಾಜ, ರಂಗಕರ್ಮಿ ವಿದ್ಯಾಹೆಗ್ಡೆ, ಸಮಾಜ ಸೇವಕಿ ಅನಿತಾ ಮೇರಿ ಮತ್ತು ಕ್ರೀಡಾಪಟು ಎಸ್.ಎನ್.ವರ್ಷಿತಾ, ಸಂಗೀತ ಸಂಯೋಜಕ ಯಶಸ್ ನಾಚಪ್ಪಅವರಿಗೆ ಖಾದ್ರಿ ಅಚ್ಯುತನ್ ಮೆಮೋರಿಯಲ್ ಸಂವಹನ ಪ್ರಶಸ್ತಿ ಪ್ರದಾನ ಮಾಡಲಾಯಿತು.