ಮಂಡ್ಯ: ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಜನ್ಮದಿನಾಚರಣೆ
ಮಂಡ್ಯ, ನ.14: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಜನ್ಮದಿನವನ್ನು ಬುಧವಾರ ಆಚರಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ ಮಾತನಾಡಿ, ಜವಾಹರ್ ಲಾಲ್ ನೆಹರು ಕುಟುಂಬ ತ್ಯಾಗಮಯಿ ಕುಟುಂಬ. ನೆಹರು ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಿ ಕಲ್ಯಾಣ ಭಾರತದ ಕನಸು ಕಂಡಿದ್ದರು ಎಂದರು. ಬೃಹತ್ ನೀರಾವರಿ, ಕೈಗಾರಿಕೆ, ಕೃಷಿಯಲ್ಲಿ ಕ್ರಾಂತಿ, ನಾಗರಿಕ ವಿಮಾನಯಾನ, ರಕ್ಷಣಾ ವ್ಯವಸ್ಥೆಯನ್ನು ಜಾರಿಗೆ ತಂದು ವಿಶ್ವದ ಅಗ್ರಗಣ್ಯ ನಾಯಕರಾಗಿದ್ದರು ಎಂದು ಅವರು ಹೇಳಿದರು. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಬಾಕ್ರಾನಂಗಲ್ ಅಣೆಕಟ್ಟೆಯನ್ನು ನಿರ್ಮಿಸಿ, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿದ್ದರು ಎಂದು ಅವರು ವಿವರಿಸಿದರು. ಕಾಂಗ್ರೆಸ್ ಪಕ್ಷ ಎಂದೂ ಸಹ ನೆಹರು ಅವರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕ. ಅವರ ನೆನಪುಗಳು ಕಾಂಗ್ರೆಸ್ಸಿಗರಿಗೆ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಂ.ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಶಿವರಾಮು, ದೀಪಕ್, ಗುರು, ಎಂ.ಬಿ.ರಾಮೇಗೌಡ, ಆನಂದ್ಕುಮಾರ್, ಚನ್ನಪ್ಪ, ಲವ, ಅಪ್ಪಾಜಿ, ಇತರ ಮುಖಂಡರು ಹಾಜರಿದ್ದರು.