ಹುಬ್ಬಳ್ಳಿ: ಸಚಿವ ದೇಶಪಾಂಡೆ - ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿ
ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮ
ಹುಬ್ಬಳ್ಳಿ, ನ. 17: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನಡುವೆ ವಾಕ್ ಸಮರ ನಡೆಯಿತು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಂದಿರಾ ಕ್ಯಾಂಟೀನ್ ಹಣ ನೀಡುವ ಕುರಿತು ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಹಣ ಹೊಂದಾಣಿಕೆಯಲ್ಲಿ ಅಪಸ್ವರ ಉಂಟಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ 30 % ಅನುದಾನ ನೀಡುತ್ತೇ. 70 % ರಷ್ಟು ಮಹಾನಗರ ಪಾಲಿಕೆ ಭರಿಸಬೇಕು. ಆದರೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿ ಇದೆ. ಹೀಗಾಗಿ ಆ ಹಣವನ್ನು ಭರಿಸಲು ಆಗುವುದಿಲ್ಲ ಎಂದು ಶೆಟ್ಟರ್ ಖಡಕ್ ಆಗಿ ಹೇಳಿದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. 70 % ರಾಜ್ಯ ಸರ್ಕಾರವೇ ನೀಡಬೇಕು ಎಂದು ಆಗ್ರಹಿಸಿದ ಜಗದೀಶ್ ಶೆಟ್ಟರ್ ಇದಕ್ಕೆ ನಮ್ಮ ಒತ್ತಾಯವಿದೆ ಎಂದರು. ಕೊನೆಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳುವ ಮೂಲಕ ಆರ್ ವಿ ದೇಶಪಾಂಡೆ ಮಾತಿನ ಚಕಮಕಿಗೆ ತೆರೆ ಎಳೆದರು.