ಬಾಗಲಕೋಟೆ: ಸಹಾಯಕ ಇಂಜಿನಿಯರ್ ಮೇಲೆ ಹಲ್ಲೆ; ಬಿಜೆಪಿ ಸದಸ್ಯನ ವಿರುದ್ಧ ಠಾಣೆಗೆ ದೂರು
ಬಾಗಲಕೋಟೆ, ನ.17: ಸಹಾಯಕ ಇಂಜಿನಿಯರ್ ಮುಹಮ್ಮದ್ ರಿಝ್ವನ್ ಎಂಬುವರ ಮೇಲೆ ಬಾದಾಮಿ ಪುರಸಭೆ ಬಿಜೆಪಿ ಸದಸ್ಯನೋರ್ವ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.
ಬಾದಾಮಿ ನಗರದ ವಾರ್ಡ್ ಸಂಖ್ಯೆ 22ರ ಬಿಜೆಪಿ ಸದಸ್ಯ ಬಸವರಾಜ ತೀರ್ಥಪ್ಪನವರ್ ಎಂಬಾತ ನ.15ರಂದು ಹಲ್ಲೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಕಚೇರಿ ಸಮಯದಲ್ಲಿ ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಿಟ್ಟುಗೊಂಡು ಬಸವರಾಜ ತೀರ್ಥಪ್ಪನವರ್ ಮತ್ತು ಆತನ ಸಹಾಯಕರು ಜೊತೆಗೂಡಿ ಸಹಾಯಕ ಇಂಜಿನಿಯರ್ ಮುಹಮ್ಮದ್ ರಿಝ್ವನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮುಹಮ್ಮದ್ ರಿಝ್ವನ್, ತಮ್ಮ ಕರ್ತವ್ಯ ಅಡ್ಡಿಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಬಸವರಾಜ ವಿರುದ್ಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story