ಕೊಳ್ಳೇಗಾಲ: ಪತಿಯ ಮನೆಯಲ್ಲಿದ್ದ ಯುವತಿಯ ಅಪಹರಿಸಿ ಮರ್ಯಾದ ಹತ್ಯೆ; ಆರೋಪ
ಮುತ್ತುರಾಜು- ಜ್ಯೋತಿ ದಂಪತಿ
ಚಾಮರಾಜನಗರ/ಕೊಳ್ಳೇಗಾಲ: ನ.20: ಮನೆಯವರ ವಿರೋಧದ ನಡುವೆ 2 ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿ ಗಂಡನ ಮನೆಯಲ್ಲಿದ್ದ ಮಹಿಳೆಯನ್ನು ಪೋಷಕರು ಬಲವಂತವಾಗಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಶಿವನಸಮುದ್ರ ಕಾಲುವೆಯಲ್ಲಿ ಎಸೆದಿದ್ದಾರೆ ಎಂದು ಪತಿ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಎಲ್ಲೆಮಾಳ ಬಳಿಯ ಬೂದುಗುಪ್ಪೆ ವಾಸಿ ಮುತ್ತುರಾಜುರ ಪತ್ನಿ ಜ್ಯೋತಿ (20) ಕೊಲೆಯಾದ ಮಹಿಳೆ. ಮೃತ ಮಹಿಳೆ ಕೆವಿಎನ್ ದೊಡ್ಡಿ ಗ್ರಾಮದ ಕೃಷ್ಣಯ್ಯನವರ ಮಗಳಾಗಿದ್ದು, ಬೂದಗುಪ್ಪೆ ಗ್ರಾಮದ ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಮುತ್ತುರಾಜು 2 ವರ್ಷಗಳಿಂದ ಇವಳನ್ನು ಪ್ರೀತಿಸುತ್ತಿದ್ದು, ಇತ್ತೀಚಿಗೆ ಇಬ್ಬರು ಮದುವೆ ಮಾಡಿಕೊಂಡಿದ್ದರು.
ಮೃತಳನ್ನು ಬೇರೆಯವರ ಜೊತೆ ಮದುವೆ ಮಾಡಲು ಪೋಷಕರು ಸಿದ್ಧತೆಯಲ್ಲಿರುವ ವಿಷಯವನ್ನು ಪ್ರಿಯಕರನಿಗೆ ತಿಳಿಸಿ, ತನ್ನನ್ನು ಎಲ್ಲಿಯಾದರು ಕರೆದುಕೊಂಡು ಹೋಗಿ ಮದುವೆಯಾಗುವಂತೆ ಮುತ್ತುರಾಜುವನ್ನು ಒತ್ತಾಯಿಸಿದ್ದಳು ಎನ್ನಲಾಗಿದೆ. ಅದರಂತೆ ಸೆ.7 ರಂದು ಚಿಕ್ಕ ತಿರುಪತಿಯಲ್ಲಿ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು.
ನ.16 ರಂದು ಬೆಂಗಳೂರಿನಿಂದ ಬೂದಗುಪ್ಪ ಗ್ರಾಮಕ್ಕೆ ಇಬ್ಬರೂ ಬಂದಿದ್ದರು. ಬೆಳಗ್ಗೆ ಮುತ್ತುರಾಜು ಜಮೀನಿನ ಕಡೆ ಹೋಗಿದ್ದಾಗ ಮನೆಯಲ್ಲಿದ್ದ ಜ್ಯೋತಿಯನ್ನು ತಂದೆ ಕೃಷ್ಣಯ್ಯ, ತಾಯಿ ವೆಂಕಟಲಕ್ಷ್ಮಮ್ಮ, ತಾತ ಗೋವಿಂದಯ್ಯ, ಅಜ್ಜಿ ತಿರುಮಮ್ಮ, ಸೋದರ ಮಾವ ಕೈಲಾಸ ಎಂಬವರು ಇವರ ಮನೆಗೆ ಬಂದು ಮುತ್ತುರಾಜುರ ತಾಯಿಯ ಮೇಲೆ ಹಲ್ಲೆ ಮಾಡಿ ಜ್ಯೋತಿಯನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
'ಈ ವಿಷಯ ತಿಳಿದು ಕೆವಿಎನ್ ದೊಡ್ಡಿ ಗ್ರಾಮಕ್ಕೆ ಹೋಗಿ ಮಾವನ ಮನೆಯಲ್ಲಿ ನೋಡಿದಾಗ ಯಾರು ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸುಳಿವು ದೊರಕಿರಲಿಲ್ಲ. ನನ್ನ ಪತ್ನಿಯ ಐವರು ಸಂಬಂಧಿಕರು ಕುತ್ತಿಗೆಗೆ ಟವಲ್ ಬಿಗಿದು ಕೊಲೆ ಮಾಡಿ ಶಿವನಸಮುದ್ರದ ಬಳಿ ನದಿಗೆ ಬಿಸಾಡಿದ್ದಾರೆ' ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ ಮುತ್ತುರಾಜು ದೂರು ನೀಡಿದ್ದಾರೆ.
ನ.20ರಂದು ಶಿವನಸಮುದ್ರದ ಬಳಿ ವಿದ್ಯುತ್ ಸ್ಥಾವರಕ್ಕೆ ತೆರಳುವ ನಾಲೆಯಲ್ಲಿ ಯುವತಿಯ ಮೃತದೇಹ ತೇಲುತ್ತಿರುವ ವಿಷಯ ಸಾರ್ವಜನಿಕರಿಂದ ಬೆಳಗ್ಗೆ 9 ಗಂಟೆಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಸಬ್ ಇನ್ಸ್ಸ್ಪೆಕ್ಟರ್ ವನರಾಜು ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪತಿಯನ್ನು ಕರೆದು ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ವೈದ್ಯರಿಂದ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಿದರು.
ಎಎಸ್ಪಿ ಗೀತಾ, ಡಿವೈಎಸ್ಪಿ ಪ್ರಭಾರ ಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ ಸ್ಥಳಕ್ಕೆ ಆಗಮಿಸಿ ಪೋಷಕರಿಂದ ಮಾಹಿತಿ ಪಡೆದು ಮೃತಳ ಸಾವಿನ ಕುರಿತು ತನಿಖೆಗೆ ಮುಂದಾಗಿದ್ದಾರೆ.