ಚಿಕಿತ್ಸೆಗಾಗಿ ಸಿದ್ದಗಂಗಾ ಸ್ವಾಮೀಜಿ ಚೆನ್ನೈ ಆಸ್ಪತ್ರೆಗೆ
ತುಮಕೂರು, ಡಿ.6: ಅನಾರೋಗ್ಯದಿಂದ ಬಳಲುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ಈ ಸಂಬಂಧ ಎಲ್ಲ ವ್ಯವಸ್ಥೆಗಳನ್ನು ರಾಜ್ಯ ಸರಕಾರ ಮಾಡಿದೆ.
ಸ್ವಾಮೀಜಿಯನ್ನು ಇದೀಗ ತುಮಕೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಏರ್ ಆ್ಯಂಬುಲೆನ್ಸ್ ಮೂಲಕ ಅವರು ಚೆನ್ನೈ ತಲುಪಲಿದ್ದಾರೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ಝೀರೋ ಟ್ರಾಫಿಕ್ನಲ್ಲಿ ಸ್ವಾಮೀಜಿಯವರಿದ್ದ ಕಾರು ಬೆಳಗ್ಗೆ 10:30 ಸುಮಾರಿಗೆ ಸಿದ್ದಗಂಗಾ ಮಠದಿಂದ ಈಗಾಗಲೇ ಬೆಂಗಳೂರಿನತ್ತ ಹೊರಟಿದೆ. ಎಚ್ಎಎಲ್ ವಿಮಾನ ನಿಲ್ದಾಣದಿಂದ ಅವರನ್ನು ಏರ್ ಆ್ಯಂಬುಲೆನ್ಸ್ನಲ್ಲಿ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ಸ್ವಾಮೀಜಿಯನ್ನು ಚೆನ್ನೈಗೆ ಕರೆದೊಯ್ಯುತ್ತಿರುವ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಭಕ್ತರ ದಂಡೇ ನೆರೆದಿದೆ.
ಸರಕಾರಿ ವೆಚ್ಚದಲ್ಲೇ ಸ್ವಾಮೀಜಿಗೆ ಚಿಕಿತ್ಸೆ: ಮುಖ್ಯಮಂತ್ರಿ
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿಗೆ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಸರಕಾದ ವತಿಯಿಂದ ಮಾಡಲಾಗುವುದು. ಪ್ರತಿ ಕ್ಷಣದ ಮಾಹಿತಿ ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.