ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇನೆ: ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಡಿ.21: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವ ಭಾರತಕ್ಕೆ ಅತ್ಯಗತ್ಯವಾಗಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ದೇಶದ ಭವಿಷ್ಯ ಇನ್ನಷ್ಟು ಗಟ್ಟಿಯಾಗಲಿದೆ. ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಸ್ಥಾನ ಸಿಗಬೇಕೆಂದು ತಾನು ಗುರುದತ್ತಾತ್ರೇಯನಿಗೆ ಹರಕೆ ಹೊತ್ತಿದ್ದೇನೆ. ಈ ಕಾರಣಕ್ಕೆ ನಗರದಲ್ಲಿ ಭಿಕ್ಷಾಟನೆ ಹಮ್ಮಿಕೊಂಡಿದ್ದೇನೆಂದು ಶಾಸಕ ಸಿ.ಟಿ.ರವಿ ಹೇಳಿದರು.
ಶನಿವಾರ ನಡೆಯುವ ದತ್ತಜಯಂತಿ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಭಿಕ್ಷಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾರ್ಥ ರಹಿತ ರಾಜಕಾರಣಿಗೆ ಮುಂದಾಳತ್ವದ ಅಗತ್ಯವಿದೆ. ನರೇಂದ್ರ ಮೋದಿ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸ್ವಾರ್ಥ ರಹಿತವಾಗಿ ಆಡಳಿತ ನಡೆಸಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಅಪಾರ ಕೀರ್ತಿ ಧಕ್ಕುವಂತೆ ಮಾಡಿದ್ದಾರೆ ಎಂದರು.
ಜಾಗತಿಕ ಮಟ್ಟದಲ್ಲಿ ಮೋದಿ ಆಡಳಿತದಿಂದ ಅಪಾರ ಗೌರವ ಸಿಕ್ಕಿದೆ. ಈ ಗೌರವ ದೇಶಕ್ಕೆ ಮತ್ತೆ ಮತ್ತೆ ಸಿಗುವಂತಾಗಲು ನರೇಂದ್ರ ಮೋದಿ ಅವರೇ ದೇಶದ ಮುಂದಿನ ಪ್ರಧಾನಮಂತ್ರಿಯಾಗಬೇಕು. ಈ ಉದ್ದೇಶದಿಂದಲೇ ತಾನು ಭಿಕ್ಷಾಟನೆ ಮಾಡುವ ಹರಕೆ ಹೊತ್ತಿದ್ದೆ. ದತ್ತಭಕ್ತರೊಂದಿಗೆ ಶುಕ್ರವಾರ ನಗರದಲ್ಲಿ ಭಿಕ್ಷಾಟನೆ ಮಾಡಿದ್ದೇನೆಂದು ರವಿ ತಿಳಿಸಿದರು.
ಬಿಜೆಪಿ ಮುಖಂಡರಾದ ವರಸಿದ್ದಿ ವೇಣುಗೋಪಾಲ್, ಎಚ್.ಡಿ ತಮ್ಮಯ್ಯ ಮತ್ತಿರರು ಸಿ.ಟಿ.ರವಿ ಅವರೊಂದಿಗೆ ಭಿಕ್ಷಾಟನೆಯಲ್ಲಿ ಭಾಗಿಯಾಗಿದ್ದರು.