"24 ಗಂಟೆಯಲ್ಲಿ ಸರಕಾರ ಪತನವಾಗದಿದ್ದರೆ ಉಮೇಶ್ ಕತ್ತಿ ರಾಜೀನಾಮೆ ನೀಡುತ್ತಾರಾ?"
ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು, ಡಿ.26: ಮುಂದಿನ 24 ಗಂಟೆಯಲ್ಲಿ ಸರಕಾರ ಪತನವಾಗದೆ ಇದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ಉಮೇಶ್ ಕತ್ತಿ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಅವರು ಭವಿಷ್ಯವಾಣಿ ನುಡಿದಿದ್ದಾರೆ. ಮಾತು ನಿಜವಾಗದಿದ್ದರೆ ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನೆ ಮಾಡಿದರು.
ನೀವು ಹೇಳುವ ಮಾತಿಗೆ ಆಧಾರವಿದ್ದರೆ ಅದನ್ನು ಸ್ಪಷ್ಟವಾಗಿ ಹೇಳಿ. ಅದು ಬಿಟ್ಟು ಹುಚ್ಚುಚ್ಚಾಗಿ ಈ ರೀತಿ ಆಡಬಾರದು. ಸುಮ್ಮನೆ ಹೇಳಿಕೆ ಕೊಟ್ಟು ಅಸ್ಥಿರತೆ ಸೃಷ್ಟಿಸುವ ಯತ್ನ ಮಾಡಬಾರದು ಎಂದು ಅವರು ವಾಗ್ದಾಳಿ ನಡೆಸಿದರು.
ಒಳ್ಳೆಯ ಮಾತುಕತೆ ಆಗಿದೆ: ಖಾತೆಗಳ ಹಂಚಿಕೆ ಬಗ್ಗೆ ಒಳ್ಳೆಯ ಮಾತುಕತೆ ಆಗಿದೆ. ಆದರೆ, ಖಾತೆ ಹಂಚಿಕೆ ವೇಳೆ ಬೇಸರ ಆಗಿದೆ ಎಂದೆಲ್ಲಾ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಡುವೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಅದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದರು.