ಜ.15 ರಂದು ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ
ಜ.6 ರಂದು ವಿವಿಧ ಸ್ಪರ್ಧೆ
ಮಡಿಕೇರಿ, ಜ.3: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಜ.15 ರಂದು ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ ನಡೆಯಲಿದ್ದು, ಇದರ ಪ್ರಯುಕ್ತ ಜ.6 ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎ.ಸಂಶುದ್ದೀನ್ ಅವರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜ.6 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಹದೇವಪೇಟೆಯಲ್ಲಿರುವ ಕ್ರೆಸೆಂಟ್ ಶಾಲಾ ಮೈದಾನದಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಸ್ಪರ್ಧೆಗಳು ನಡೆಯಲಿವೆ ಎಂದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಉದ್ಘಾಟಿಸಲಿದ್ದು, ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ನ ಉಪಾಧ್ಯಕ್ಷ ಎಸ್.ಐ.ಮುನೀರ್ ಅಹ್ಮದ್ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಮಹಿಳೆಯರಿಗಾಗಿ ಸ್ಪರ್ಧೆಗಳು ನಡೆಯಲಿದ್ದು, ಮಕ್ಕಳ ರಕ್ಷಣಾಧಿಕಾರಿ ಮುಮ್ತಾಜ್ ಉದ್ಘಾಟಿಸಲಿದ್ದು, ಶಿಕ್ಷಕಿ ಹಾಗೂ ಕಲಾವಿದೆ ಜಯಲಕ್ಷ್ಮಿ ಆಶಯ ನುಡಿಗಳನ್ನಾಡಲಿದ್ದಾರೆ.
ಕ್ರಿಕೆಟ್ ಪಂದ್ಯಾವಳಿ
ಜ.12 ಮತ್ತು 13 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯನ್ನು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ಉದ್ಘಾಟಿಸಲಿದ್ದು, ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ನ ಉಪಾಧ್ಯಕ್ಷ ಎಂ.ಬಿ.ನಾಸಿರ್ ಅಹ್ಮದ್ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಇತರ ಸ್ಪರ್ಧೆಗಳ ವಿವರ
ಗುಂಡು ಮತ್ತು ಹೆಣ್ಣುಮಕ್ಕಳಿಗೆ ಕಾಳು ಹೆಕ್ಕುವುದು, ಚಿತ್ರ ಬಿಡಿಸುವುದು, ಕಪ್ಪೆ ಜಿಗಿತ, ನಾಲ್ಕು ಕಾಲೋಟ, ನೆನಪು ಶಕ್ತಿ, ಮಗ್ಗಿ ಆಟ, ಬಲೂನ್ ಒಡೆಯುವುದು, ತೆಲೆಹೊರೆ ಓಟದ ಸ್ಪರ್ಧೆ ನಡೆಯಲಿದೆ. ಸಾಮಾನ್ಯ ಪುರುಷರಿಗೆ ಕನ್ನಡದಿಂದ ಬ್ಯಾರಿಗೆ ಅನುವಾದ, ಆಶು ಭಾಷಣ, ರಸಪ್ರಶ್ನೆ, ಬ್ಯಾರಿ ಹಾಡುಗಾರಿಕೆ, ಸಾಮಾನ್ಯ ಮಹಿಳೆಯರಿಗೆ ಕನ್ನಡದಿಂದ ಬ್ಯಾರಿಗೆ ಅನುವಾದ, ಆಶುಭಾಷಣ, ರಸಪ್ರಶ್ನೆ, ಬ್ಯಾರಿ ಹಾಡುಗಾರಿಕೆ, ಪದ ಸೇರಿಸುವಾಟ, ಜಾಗ ಹಿಡಿಯುವಾಟ, ಮಧುರಂಗಿ ಹಾಕುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಶುದ್ದೀನ್ ಮಾಹಿತಿ ನೀಡಿದ್ದಾರೆ.
ಸಮಾವೇಶದಲ್ಲಿ 10 ಮಂದಿ ಬ್ಯಾರಿ ಸಾಧಕರನ್ನು ಸನ್ಮಾನಿಸಲಾಗುವುದು, ಅಲ್ಲದೆ ಸುಮಾರು 30 ಮಂದಿ ಬ್ಯಾರಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ಜ.10 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ : 9480083264, 984406658, 9886446444 ನ್ನು ಸಂಪರ್ಕಿಸಬಹುದಾಗಿದೆ.